ತೆಲಸಂಗ: ‘ಹಣದಾಸೆಗಾಗಿ ಭೂಮಿಯಿಂದ ಕೇವಲ ಪಡೆಯುತ್ತಾ ಹೋದರೆ ಮುಂದೊಂದು ದಿನ ಬಂಜರಾಗಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಪರಿಸರ ಸ್ನೇಹಿ ಬೇಸಾಯ ಪದ್ಧತಿ ಅನುಸರಿಸುವ ಮೂಲಕ ಭೂತಾಯಿಯ ಋಣ ತೀರಿಸಬೇಕಿದೆ’ ಎಂದು ರಾಜ್ಯ ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಸಾವಯುವ ಕೃಷಿ ಮಾಡುವುದರಿಂದ ಭೂಮಿಯ ಫಲವತ್ತತೆ ಮಾತ್ರವಲ್ಲದೆ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಹೆಚ್ಚು ಇಳುವರಿ ಮತ್ತು ಹಣದಾಸೆಗೆ ಇಲ್ಲದ್ದನ್ನು ಸಿಂಪಡಿಸಿ ವಿಷಪೂರಿತ ಆಹಾರ ಉತ್ಪಾದಿಸಿ, ಭೂಮಿ ಬಂಜರಾಗಲು ನಾವು ಕಾರಣವಾಗಬಾರದು. ಇದರಿಂದ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಭೂಮಿಗೆ ಪ್ರತ್ಯುತ್ತರವಾಗಿ ಕೊಡುವ ಕಾರ್ಯವನ್ನೂ ನಾವು ಮಾಡಬೇಕು. ಫಲವತ್ತತೆ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ರೈತ ಸ್ವಾಲಂಬಿ ಆಗಬೇಕು. ಜಗಕ್ಕೆ ಅನ್ನ ನೀಡುವ ಆತ ಜೀವನದುದ್ದಕ್ಕೂ ಸರ್ಕಾರದ ಮುಂದೆ ಕೈಚಾಚುವಂತೆ ಮಾಡಿದ ಕಾಂಗ್ರೆಸ್ನ ಡೋಂಗಿ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿ ಯೋಜನೆಗಳು ಮತ್ತು ಹೊಸ ರೈತಪರ ಕಾನೂನುಗಳೆ ಉತ್ತರವಾಗಬೇಕು. ದೇಶದಲ್ಲಿ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅನ್ನದಾತರನ್ನು ಸಾಲಗಾರರನ್ನಾಗಿ ಮಾಡಿ ಅವರ ಬದುಕಿನೊಂದಿಗೆ ರಾಜಕೀಯ ಸವಾರಿ ನಡೆಸಿದೆ. ಇದರಿಂದ ರೈತರು ಮುಕ್ತರಾಗಬೇಕೆಂಬ ಉದ್ದೇಶದಿಂದ ಉಪಯುಕ್ತ ಕಾನೂನುಗಳನ್ನು ಕೇಂದ್ರ ಜಾರಿಗೊಳಿಸಿದೆ’ ಎಂದು ಸಮರ್ಥಿಸಿಕೊಂಡರು.
‘ಕಾಂಗ್ರೆಸ್ ರೈತರನ್ನು ತಪ್ಪು ದಾರಿಗೆಳೆಯುವ ಪ್ರಯತ್ನದಲ್ಲಿದೆ. ಇದನ್ನು ಕೃಷಿಕರು ಅರ್ಥ ಮಾಡಿಕೊಳ್ಳಬೇಕು. ಕೃಷಿ ಪ್ರಧಾನವಾದ ದೇಶದಲ್ಲಿ ರೈತ ವಿರೋಧಿ ಕಾನೂನು ಜಾರಿಗೊಳಿಸಲು ಸಾಧ್ಯವಿದೆಯೇ? ಕಾಂಗ್ರೆಸ್ಸಿಗರು ರೈತರ ಜೀವನದೊಂದಿಗೆ ರಾಜಕೀಯ ಮಾಡಬಾರದು’ ಎಂದರು.
ಉಪ ತಹಶೀಲ್ದಾರ್ ಎಂ.ಎಸ್. ಯತ್ನಟ್ಟಿ, ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ, ರೈತ ಈಶ್ವರ ಉಂಡೋಡಿ, ರಾಜು ಪರ್ನಾಕರ, ಶೇಖರ ವಳಸಂಗ, ಅಂಬರೀಷ ಕಂದಾರೆ ಇದ್ದರು.