ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ‘ಸಾಮಾನ್ಯವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಆದರೆ, ಗೋಕಾಕದಲ್ಲಿ ಚೆಕ್ ವಿತರಿಸಿರುವುದು ನಿಜ. 288 ಮಂದಿಯ ಮನೆಗಳಿಗೆ ಹಾನಿಯಾಗಿಲ್ಲ; ಅವರು ಪರಿಹಾರಕ್ಕೆ ಅರ್ಹರಾಗಿಲ್ಲ ಎನ್ನುವುದು ಮರುದಿನವೇ ಗೊತ್ತಾಗಿದ್ದರಿಂದ ಚೆಕ್ ತಡೆ ಹಿಡಿದಿದ್ದೇವೆ. ಇದಕ್ಕೆ ವಿಡಿಯೊ ದಾಖಲೆಯೂ ಇದೆ ಎಂದು ಅಲ್ಲಿನ ತಹಶೀಲ್ದಾರ್ ತಿಳಿಸಿದ್ದಾರೆ. ಆದಾಗ್ಯೂ, ರೈತ ಮುಖಂಡರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಶೀಲಿಸುವಂತೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗೆ ಸೂಚಿಸಿದ್ದೇನೆ. ನೈಜ ಫಲಾನುಭವಿಗಳಿದ್ದಲ್ಲಿ ಅವರಿಗೆ ಪರಿಹಾರ ದೊರೆಯುವಂತೆ ಕ್ರಮ ವಹಿಸುತ್ತೇನೆ’ ಎಂದು ತಿಳಿಸಿದರು.