ಬೆಳಗಾವಿ: ನಗರದಲ್ಲಿ ಶನಿವಾರ ಸಂಜೆ ಗುಡುಗು–ಮಿಂಚು ಸಹಿತವಾಗಿ ಒಂದು ತಾಸಿಗೂ ಅಧಿಕ ಸುರಿದ ಧಾರಾಕಾರ ಮಳೆಯಿಂದಾಗಿ ಜನರು ಪರದಾಡಿದರು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ ವರುಣ ಅಬ್ಬರಿಸಿದ್ದರಿಂದ ತಗ್ಗು ಪ್ರದೇಶದಲ್ಲಿರುವ ಅಂಗಡಿ–ಮುಂಗಟ್ಟು ಮತ್ತು ಮನೆಗಳಿಗೆ ನೀರು ನುಗ್ಗಿತು. ನೀರು ಹೊರಹಾಕಲು ಜನರು ಪ್ರಯಾಸಪಟ್ಟರು. ಮತ್ತೊಂದೆಡೆ, ಮುಖ್ಯ ರಸ್ತೆಗಳಲ್ಲೇ ನೀರು ಸರಾಗವಾಗಿ ಹರಿದುಹೋಗದೆ ನಿಂತಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.
ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದ್ದರಿಂದ ಪಾಂಗುಳ ಗಲ್ಲಿ, ಭೋವಿ ಗಲ್ಲಿ, ನರಗುಂದಕರ ಭಾವೆ ಚೌಕ್, ಕೋಟೆ ರಸ್ತೆಯಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯಿತು. ಭೆಂಡಿ ಬಜಾರ್ ವೃತ್ತದಲ್ಲಿ ಮರ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಯಿತು.
ವಿವಿಧ ವಸ್ತುಗಳ ಖರೀದಿಗಾಗಿ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಜೋರಾಗಿ ಮಳೆ ಸುರಿದಿದ್ದರಿಂದ ಆಶ್ರಯಕ್ಕಾಗಿ ಅವರು ಪರದಾಡಿದರು. ರಸ್ತೆಬದಿ ಮಾರಾಟ ಮಾಡುತ್ತಿದ್ದವರ ತರಕಾರಿಗಳು ನೀರು ಪಾಲಾದವು.
ಹಲವೆಡೆ ಮಳೆ: ನಿಪ್ಪಾಣಿ, ಮುನವಳ್ಳಿ, ಚನ್ನಮ್ಮನ ಕಿತ್ತೂರಿನಲ್ಲಿ ಗುಡುಗು–ಮಿಂಚು ಸಹಿತವಾಗಿ ಉತ್ತಮ ಮಳೆ ಸುರಿಯಿತು. ಬೈಲಹೊಂಗಲದಲ್ಲಿ ಸಾಧರಣ ಮಳೆಯಾಯಿತು.