ಎಂಬತ್ನಾಲ್ಕು ಜೀವರಾಶಿಗಳನ್ನು ಸುತ್ತಿ ಬರುವ ಈ ಶರೀರವು; ಅರಿವು, ಆಚಾರದ ಕುರಿತು ಚಿಂತಿಸದೆ ಮನಸ್ಸಿನ ಚಿತ್ತ ಚಾಂಚಲ್ಯಕ್ಕೆ ಒಳಗಾಗಿ ತನ್ನ ಗುರಿಯನ್ನೇ ಮರೆತು ಬಿಟ್ಟಿದೆ. ಅದಕ್ಕಾಗಿಯೇ ಬಸವಣ್ಣನವರು ನಾನು ಬಂದ ರೀತಿಯನ್ನಾದರೂ ನೋಡಿ ನನ್ನನ್ನು ಸಲಹು ತಂದೆ ಎಂದು ಈ ವಚನದ ಮೂಲಕ ಬೇಡಿಕೊಂಡಿದ್ದಾರೆ. ಮನಸ್ಸಿನ ಮಾತು ಕೇಳಿ ಗುರಿಯನ್ನು ತಪ್ಪುತ್ತಿದ್ದೇನೆ; ಬುದ್ಧಿಯು ಅದರ ಪ್ರಭಾವಕ್ಕೊಳಗಾಗಿದೆ ಎಂದಿದ್ದಾರೆ. ಮನುಷ್ಯನಿಗೆ ಮನಸ್ಸು ಮತ್ತು ಬುದ್ಧಿ ಬಹಳ ಮುಖ್ಯವಾದವು. ಅವುಗಳನ್ನು ಹಿಡಿತದಲ್ಲಿಟ್ಟುಕೊಂಡವರು ಶ್ರೇಷ್ಠರಾಗುತ್ತಾರೆ. ಭಾಗಶಃ ಜನರು ಇವುಗಳ ಹಿಡಿತದಲ್ಲಿರುವುದರಿಂದ ಭಗವಂತನ ಆರಾಧನೆ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಬಸವಣ್ಣನವರು ಇವುಗಳ ತಪ್ಪುಗಳನ್ನು ಮನ್ನಿಸಿ, ನನ್ನನ್ನು ಕಾಪಾಡು ಎಂದು ಪ್ರಾರ್ಥಿಸಿದ್ದಾರೆ.