ಒಲೆಯ ಬೆಂಕಿ ಜಾಸ್ತಿಯಾದರೆ ನಂದಿಸಬಹುದು. ಆದರೆ, ಈ ಭೂಮಿಗೇ ಬೆಂಕಿ ಬಿದ್ದರೆ ನಂದಿಸಲಾಗುವುದಿಲ್ಲ. ಕೆರೆಯ ನೀರನ್ನು ಕೆರೆಯೇ ಕುಡಿದರೆ, ನೀರನ್ನು ಎಲ್ಲಿಂದ ತರುವುದು? ಗದ್ದೆಯಲ್ಲಿರುವ ಫಸಲನ್ನು ಬೇಲಿಯೆ ಕಬಳಿಸಿದರೆ ಬೆಳೆಯ ಗತಿಯೇನು? ಮನೆ ಸಂರಕ್ಷಿಸುವ ಒಡತಿಯೆ ಮನೆಯಲ್ಲಿ ಕಳವು ಮಾಡಿದರೆ ಮನೆಯ ಉದ್ಧಾರ ಹೇಗೆ ಸಾಧ್ಯ? ಹಾಗೆಯೇ ಮಗುವಿಗೆ ಆಹಾರವಾದ ತಾಯಿಯ ಎದೆ ಹಾಲು ವಿಷವಾದರೆ ಮಗು ಬದುಕುವುದೇ? ಭೂಮಿ, ಕೆರೆ, ಬೇಲಿ, ಒಡತಿ, ತಾಯಿ ಇವೆಲ್ಲವೂ ಅಪರಿಮಿತ ನಂಬಿಕೆ ಒಳಗೊಂಡಿರುವಂಥವು. ಇವುಗಳಿಂದಲೇ ದ್ರೋಹವಾದರೆ ನಂಬಿಕೆಯ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಬೇರೆಯವರಿಂದ ತಪ್ಪುಗಳಾದರೆ ಅಲಕ್ಷ್ಯ ಮಾಡಬಹುದು. ನಂಬಿದವರಿಂದಲೇ ನೋವುಗಳಾದರೆ ಯಾರ ಹತ್ತಿರವೂ ಹೇಳಿಕೊಳ್ಳಲಾಗುವುದಿಲ್ಲ. ಈ ವಚನದ ಮೂಲಕ ಬಸವಣ್ಣ ಅವರು ನಂಬಿಕೆ ತುಂಬಾ ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ಹೀಗಾಗಿ, ನಂಬಿಕೆ–ವಿಶ್ವಾಸ ಕಳೆದುಕೊಳ್ಳಬಾರದು.