ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೆ ಮಾಡಿದ ಅನ್ಯಾಯ ಪುನರಾವರ್ತನೆಯಾಗದಿರಲಿ: ವಿನಯ ಕುಲಕರ್ಣಿ

Published 4 ಜೂನ್ 2023, 12:44 IST
Last Updated 4 ಜೂನ್ 2023, 12:44 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದಲ್ಲಿ ವೀರೇಂದ್ರ ಪಾಟೀಲ ನೇತೃತ್ವ ವಹಿಸಿದ್ದ ನಂತರ, ಈ ಬಾರಿಯೇ ಕಾಂಗ್ರೆಸ್‌ಗೆ ದೊಡ್ಡಮಟ್ಟದಲ್ಲಿ ಬಹುಮತ ಸಿಕ್ಕಿದೆ. ಆದರೆ, ಲಿಂಗಾಯತ ಸಮುದಾಯಕ್ಕೆ ಹಿಂದೆ ಮಾಡಿದ ಅನ್ಯಾಯ ಪುನರಾವರ್ತನೆಯಾಗಬಾರದು’ ಎಂದು ಶಾಸಕ ವಿನಯ ಕುಲಕರ್ಣಿ ವಿನಂತಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಚುನಾವಣೆಗಳಲ್ಲಿ ನಮ್ಮ ಸಮುದಾಯದವರು ಕಾಂಗ್ರೆಸ್‌ಗೆ ಕಡಿಮೆ ಪ್ರಮಾಣದಲ್ಲಿ ಮತ ನೀಡಿದ್ದರು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದರಿಂದ ಕಾಂಗ್ರೆಸ್‌ 135 ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ನಮ್ಮ ಸಮುದಾಯಕ್ಕೆ ಒತ್ತು ನೀಡದಿದ್ದರೆ, ಕಾಂಗ್ರೆಸ್ ಪರಿಸ್ಥಿತಿ ಇಷ್ಟುವರ್ಷ ಏನಾಗಿತ್ತು ಎಂಬುದನ್ನು ಪಕ್ಷದ ಮುಖಂಡರು ಗಮನದಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿದರು.

ಪಂಚಮಸಾಲಿ‌ ಮೀಸಲಾತಿ ಹೋರಾಟ ಮುನ್ನಡೆಸಿದವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ವಿನಯ, ‘ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಪಂಚಮಸಾಲಿ ಸಮುದಾಯದ 13 ಜನರು ಆಯ್ಕೆಯಾಗಿದ್ದೇವೆ. ಯಾರು ಸಮುದಾಯ ಕಟ್ಟುವ ಕೆಲಸವನ್ನು ಮಾಡಿದ್ದರೋ, ಅವರನ್ನು ಪಕ್ಷ ಗುರುತಿಸಬೇಕಿತ್ತು. ಆದರೆ, ಆ ಕೆಲಸವಾಗಿಲ್ಲ. ಇದನ್ನು ಸಮುದಾಯ ಬಹಳ ಸೂಕ್ಷ್ಮತೆಯಿಂದ ಗಮನಿಸುತ್ತದೆ’ ಎಂದರು.

‘ಈ ವಿಚಾರ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಖಾತೆ ಹಂಚಿಕೆಯಲ್ಲೂ ಲಿಂಗಾಯತರಿಗೆ ಅನ್ಯಾಯವಾಗಿದೆ’ ಎಂದು ಅಸಮಾಧಾನ ಹೊರಹಾಕಿದರು.

‘ಸಹಜವಾಗಿ ಮತ್ತೆ ಸಂಪುಟ ವಿಸ್ತರಣೆಯಾಗುತ್ತದೆ. ನಮ್ಮ ಸಮುದಾಯವಷ್ಟೇ ಅಲ್ಲ; ಬೇರೆ ಸಮುದಾಯಗಳಿಗೂ ಅವಕಾಶ ಸಿಗಬೇಕಿದೆ. ಹಿಂದೆ ಸಚಿವರಾಗಿದ್ದವರಿಗೆ ಮತ್ತೆ ಅವಕಾಶ ಕೊಡುವಂಥದ್ದೇನಿದೆ? ಯುವಕರಿಗೆ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತೇವೆ. ಭವಿಷ್ಯದಲ್ಲಿ ಹೊಸ ನಾಯಕರನ್ನು ಸೃಷ್ಟಿಸಬೇಕಿದೆ’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ ನನಗೆ ಅವಕಾಶ ಸಿಕ್ಕೇ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಣ್ಣ ಮನೆಯವರು ತಿಂಗಳಿಗೆ 200 ಯೂನಿಟ್‌ ವಿದ್ಯುತ್‌ ಬಳಸಲು ಸಾಧ್ಯವೇ? ಹಾಗಾಗಿ ಅವರು ಬಳಸುವ ವಿದ್ಯುತ್‌ ಪ್ರಮಾಣ ಆಧರಿಸಿ, ಶೇ 10ರಷ್ಟು ಹೆಚ್ಚು(ಉಚಿತವಾಗಿ) ಬಳಕೆಗೆ ಅವಕಾಶ ಕೊಟ್ಟಿದ್ದೇವೆ. ಕೆಲ ಷರತ್ತು ವಿಧಿಸಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡುವ ಬಿಜೆಪಿಯ ಯಾವ ನಾಯಕರು ತಮ್ಮ ಮನೆಯಲ್ಲಿ ಹಸು ಸಾಕಿಲ್ಲ. ಈ ಬಗ್ಗೆ ಸುಮ್ಮನೆ ಮಾತನಾಡುತ್ತಾರಷ್ಟೇ. ಪ್ಲಾಸ್ಟಿಕ್ ಆಕಳನ್ನು ಕಟ್ಟಿ ಪೂಜಿಸುವ ಅವರು, ಮನೆಯಲ್ಲೊಂದು ಆಕಳು ಕಟ್ಟಿ ಮಾತನಾಡಲಿ’ ಎಂದು ಸವಾಲು ಹಾಕಿದರು.

‘ನಾವೆಲ್ಲ ಡೇರಿ ಫಾರ್ಮರ್ಸ್‌. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಳು(1,600) ಸಾಕಿದವ ನಾನು. ಆದರೆ, ಈಗ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನವರು ಆಕಳು ಬಳಸುತ್ತಿಲ್ಲ. ಅವುಗಳಿಗೆ ಸರಿಯಾಗಿ ಮೇವು ಸಿಗದ್ದರಿಂದ ಸಾಕುವುದೇ ಕಷ್ಟವಾಗಿದೆ. ಹೀಗಿರುವಾಗ ವಯಸ್ಸಾದ ಮತ್ತು ಬರಡು ಬಿದ್ದ ಆಕಳುಗಳನ್ನು ಏನು‌ ಮಾಡೋದು?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು. ಗೋಮಾತೆ ಹೆಸರಿನಲ್ಲಿ ರಾಜಕೀಯ ಮಾಡುವವರು, ಜಾತಿವಾದಿಗಳನ್ನು ಬಿಟ್ಟು, ದನ–ಕರುಗಳನ್ನು ಸಾಕುವವರು, ಹಾಲಿನ ಡೇರಿಗಳ ಮಾಲೀಕರು ಮತ್ತು ರೈತರ ವಿಚಾರಗಳನ್ನು ಅರಿಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT