ಅಣ್ಣಾ ಎಂದ ಬೆಂಬಲಿಗನಿಗೆ ಕೈಬೀಸಿದ ವಿನಯ ಕುಲಕರ್ಣಿ

ಬೆಳಗಾವಿ: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಸಿಬಿಐ ಹಾಗೂ ಪೊಲೀಸ್ ಅಧಿಕಾರಿಗಳು ಅವರನ್ನು ಬಿಗಿ ಭದ್ರತೆಯಲ್ಲಿ ಸೋಮವಾರ ಸಂಜೆ ಇಲ್ಲಿಗೆ ಕರೆತಂದರು. ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವುದರಿಂದ, ಅವರನ್ನು ಸಿಬಿಐ ಅಧಿಕಾರಿಗಳು ಕಾರಾಗೃಹಕ್ಕೆ ಸ್ಥಳಾಂತರಿಸಿದರು. ನ್ಯಾಯಾಲಯದ ಆದೇಶ ಪ್ರತಿ ನೀಡಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿದರು.
ಜೈಲಿನೊಳಗೆ ಹೋಗುವ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ಅವರು ನಿರಾಕರಿಸಿದರು.
ಈ ವೇಳೆ, ತಮ್ಮನ್ನು ‘ಅಣ್ಣಾ’ ಎಂದು ಕರೆದ ಬೆಂಬಲಿಗನಿಗೆ ಕೈ ಬೀಸುತ್ತಾ ಸಾಗಿದರು. ವಿನಯ ಅವರ ಬಟ್ಟೆ ಮೊದಲಾದ ಸಾಮಗ್ರಿಗಳಿದ್ದ ಎರಡು ಬ್ಯಾಗ್ಗಳನ್ನು ಸಿಬ್ಬಂದಿಯೊಬ್ಬರು ಒಳಗಡೆಗೆ ಒಯ್ದರು. ಕೆಲವು ಅಭಿಮಾನಿಗಳು ಜೈಲಿನ ಆವರಣಕ್ಕೆ ಬಂದಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
‘ಸಾಮಾನ್ಯ ಕೋಣೆಯಲ್ಲಿ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಕೋವಿಡ್–19 ಕಾರಣದಿಂದಾಗಿ ಯಾರ ಭೇಟಿಗೂ ಅವಕಾಶ ಇರುವುದಿಲ್ಲ’ ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.
ಗುರುವಾರ ಅವರನ್ನು ಜೈಲಿಗೆ ತಂದಿರಿಸಿದ್ದ ಸಿಬಿಐ ಅಧಿಕಾರಿಗಳು, ಶನಿವಾರ ಬೆಳಿಗ್ಗೆ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.