ಬೆಳಗಾವಿ: ‘ನಗರದ ಅಭಿವೃದ್ಧಿಯಷ್ಟೇ ನಮ್ಮ ಗುರಿ. ಭಾಷೆ, ಜಾತಿ, ಧರ್ಮ ಬಿಟ್ಟು ಕೆಲಸ ಮಾಡುತ್ತೇವೆ’ ಎಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.
ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆಂಜನೇಯ ನಗರದ ವಾರ್ಡ್ ನಂ.36ರ ಮತಗಟ್ಟೆ ಸಂಖ್ಯೆ 247ರಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇಲ್ಲಿನ ಮಹಾನಗರಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಚಿಹ್ನೆ ಮೇಲೆ ಚುನಾವಣೆ ನಡೆದಿದೆ. ಈ ಬಗ್ಗೆ ಚರ್ಚೆಯೂ ಆಗಿದೆ. ಎಲ್ಲೆಡೆ ಉತ್ಸಾಹ ಕಂಡುಬಂದಿದೆ. ನಮ್ಮ ಪರವಾದ ವಾತಾವರಣ ಇದೆ’ ಎಂದರು.
‘ಎಲ್ಲರೊಂದಿಗೆ ಎಲ್ಲರ ವಿಕಾಸ ನಮ್ಮ ಗುರಿ. ನಾನು ಹಾಗೂ ಶಾಸಕ ಅಭಯ ಪಾಟೀಲ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಗೌರವವಿದೆ. ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆ ಮಾಡಿದ್ದರಿಂದ ನಮಗೆ ಲಾಭವಾಗಲಿದೆ. ಪಕ್ಷೇತರರು ಚುನಾವಣೆ ಬಂದಾಗ ಮಾತ್ರ ಬರುತ್ತಾರೆ. ನಮ್ಮ ಅಭ್ಯರ್ಥಿಗಳು ಹಾಗೂ ಬೇರೆ ಪಕ್ಷಗಳ ಅಭ್ಯರ್ಥಿಗಳ ನಡುವೆ ವ್ಯತ್ಯಾಸ ಇದೆ’ ಎಂದರು.