ಕಾಗವಾಡ: ತಾಲ್ಲೂಕಿನ ಐನಾಪುರದಲ್ಲಿ ಭೂ ಒತ್ತುವರಿ ಪ್ರಶ್ನಿಸಿದ್ದಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಏಳು ತಿಂಗಳ ನಂತರ ಬಹಿರಂಗವಾಗಿದೆ. ಈ ಬಗ್ಗೆ ಸಂತ್ರಸ್ತೆಯ ಪುತ್ರಿ ಕಾಗವಾಡ ಠಾಣೆಯಲ್ಲಿ ಗುರುವಾರ ಮೂವರು ಪುರುಷರ ವಿರುದ್ಧ ದೂರು ದಾಖಲಿಸಿದ್ದಾರೆ.
ಘಟನೆಯ ವಿಡಿಯೊ ತುಣುಕುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇದರಿಂದ ಗ್ರಾಮಕ್ಕೆ ಧಾವಿಸಿದ ಬೆಳಗಾವಿ ಹೆಚ್ಚುವರಿ ಎಸ್ಪಿ ಶ್ರುತಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಕಾಗವಾಡ ತಹಶೀಲ್ದಾರ್ ಸಂಜಯ ಇಂಗಳೆ ಅವರ ತಂಡ ಸಂತ್ರಸ್ತೆ ಹಾಗೂ ಕುಟುಂಬದವರಿಂದ ಮಾಹಿತಿ ಕಲೆ ಹಾಕಿತು.
‘ಮೂವರು ಆರೋಪಿಗಳು 2023ರ ಜುಲೈ 31ರಂದು ನಮ್ಮ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ. 2023ರ ಆಗಸ್ಟ್ 1ರಂದು ತಮ್ಮನ ಮೇಲೂ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡದಂತೆ ಜೀವ ಬೆದರಿಕೆ ಒಡ್ಡಿದ್ದರು’ ಎಂದು ಸಂತ್ರಸ್ತೆಯ ಪುತ್ರಿ ಹೇಳಿಕೆ ನೀಡಿದ್ದಾರೆ.
ಘಟನೆಗೆ ಕಾರಣ: ಸಂತ್ರಸ್ತೆ ಕುಟಂಬಕ್ಕೆ 1993ರಲ್ಲಿ ಸರ್ಕಾರ 3 ಎಕರೆ ಕೃಷಿ ಜಮೀನು ಮಂಜೂರು ಮಾಡಿದೆ. ಇದರಲ್ಲಿ 20 ಗುಂಟೆ ಜಮೀನು ಹಾಗೂ ಪಕ್ಕದ ಸರ್ಕಾರಿ ರಸ್ತೆಯನ್ನೂ ಆರೋಪಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
‘ಎರಡೂ ಜಾಗವನ್ನು ತೆರವು ಮಾಡಿಸಬೇಕು ಎಂದು ಕೋರಿ 2015ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವು. ಜಾಗ ಪರಿಶೀಲನೆ ಮಾಡುವಂತೆ ಅವರು ತಹಶೀಲ್ದಾರ್ಗೆ ಸೂಚನೆ ನೀಡಿದ್ದರು. ಆದರೂ ಬೇಡಿಕೆ ಈಡೇರಲಿಲ್ಲ. ನಾವು ಒತ್ತುವರಿ ಪ್ರಶ್ನಿಸಿದ್ದಕ್ಕೆ ಆರೋಪಿಗಳು ಹಲ್ಲೆ ಮಾಡಿದರು. ವಿವಸ್ತ್ರಗೊಳಿಸಿ ಅವಮಾನಿಸಿದರು’ ಎಂದು ಸಂತ್ರಸ್ತೆ ಪುತ್ರಿ ಮಾದ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
'ಭೂ ಒತ್ತುವರಿ ಸರಿಪಡಿಸಲು ಭೂಮಾಪನ ಇಲಾಖೆ ಸಿಬ್ಬಂದಿ ಕರೆದುಕೊಂಡು ಸರ್ವೆ ಕಾರ್ಯಕ್ಕೆ ನೇಮಕಾತಿ ಮಾಡಲಾಗಿದೆ. ಸಮಸ್ಯೆ ಇತ್ಯರ್ಥ ಮಾಡಲಾಗುವುದು’ ಎಂದು ತಹಶೀಲ್ದಾರ್ ಎಸ್.ಬಿ.ಇಂಗಳೆ ತಿಳಿಸಿದ್ದಾರೆ.
‘ಮಹಿಳೆ ವಿವಸ್ತ್ರಗೊಳಿಸಿದ ಘಟನೆ ಬಗ್ಗೆ ಮಾಹಿತಿ ಪಡೆದು ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ಹಿರಿಯ ಪೋಲಿಸ್ ಅಧಿಕಾರಿ ಹಾಗೂ ತಹಶಿಲ್ದಾರರಿಗೆ ಸೂಚನೆ ನೀಡಿದ್ದೇನೆ’ ಎಂದು ಶಾಸಕ ರಾಜು ಕಾಗೆ ಪ್ರತಿಕ್ರಿಯಿಸಿದರು.