ಬೆಳಗಾವಿ: ಸೋಮವಾರ ರಾತ್ರಿ ಇಲ್ಲಿಯ ವಿಷ್ಣು ಗಲ್ಲಿಯಲ್ಲಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ 25 ಜನರನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಗಲಾಟೆಗೆ ಪ್ರಚೋದನೆ ನೀಡಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಬಾರದು ಎಂದು ಹೇಳಿದ ಕಾರಣಕ್ಕೆ ಆರಂಭವಾದ ಗಲಾಟೆಯು ಒಂದು ಗಂಟೆಯ ಅವಧಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ಎರಡು ಕಡೆಯ ನೂರಾರು ಜನರು ಸೇರಿಕೊಂಡು ಕಲ್ಲು ತೂರಾಟ ಆರಂಭಿಸಿದರು.
ಮೂರು ಆಟೋ, ನಾಲ್ಕು ಮೋಟಾರ್ ಸೈಕಲ್ ಹಾಗೂ ನಾಲ್ಕು ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ವಾಹನಗಳ ಗಾಜುಗಳು ಒಡೆದು ಹೋಗಿವೆ. ಗಲ್ಲಿಯ ಚೌಕ್ನಲ್ಲಿರುವ ಧ್ವಜ ಸ್ತಂಭ ಕಿತ್ತು ಹಾಕಲಾಗಿದೆ.
ಶಾಸಕ ಅಭಯ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಮಧ್ಯಪ್ರವೇಶಿಸಿದ ಶಾಸಕ ಸಂಜಯ ಪಾಟೀಲ ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ.
ಪರಿಸ್ಥಿತಿ ಕೈ ಮೀರುತ್ತಿದೆ ಎನಿಸಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ, ಅಶ್ರುವಾಯು ಸಿಡಿಸುವಂತೆ ಸೂಚಿಸಿದರು. ಕೂಡಲೇ ಅಶ್ರುವಾಯು ಸಿಡಿಸಿ ಉದ್ರಿಕ್ತ ಜನರನ್ನು ಚದುರಿಸುವ ಮೂಲಕ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಣಕ್ಕೆ ತರಲಾಯಿತು.
ಬಂದೋಬಸ್ತ್: ಘಟನೆ ನಡೆದ ವಿಷ್ಣು ಗಲ್ಲಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.