ಸವದತ್ತಿ: ಕೃಷಿ ಪ್ರಧಾನ ರಾಷ್ಟ್ರದಲ್ಲಿ ರೈತನೇ ಬೆನ್ನೆಲುಬು. ಆದರೆ ಆತನ ಬೆನ್ನು ಮುರಿಯುವ ಕೆಲಸ ವಾಗಬಾರದು. ಒಕ್ಕಲುತನಕ್ಕೆ ನೀರು ಅಗತ್ಯವಿದೆ. ಭೂಮಿ ಹಸಿರಾದರೆ ಅದೇ ಸಮಸ್ತರ ಉಸಿರು ಎಂದು ಶಿರಕೊಳ್ಳದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಳೆದ ಮೂರು ದಿನದಿಂದ ಮಲಪ್ರಭಾ ನದಿಗೆ ಮಹದಾಯಿ ಜೋಡಿಸುವಂತೆ ಆಗ್ರಹಿಸಿ ರೈತ ಸೇನಾ ಮಿನಿ ವಿಧಾನಸೌಧದ ಎದುರು ಆಯೋಜಿಸಿದ್ದ ರೈತರ ಚಿಂತನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದ ಸಮಸ್ತ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ ಅದನ್ನು ಅರಿತು ನ್ಯಾಯಾಧೀಕರಣ ಸಮಿತಿ ಸಾಧಕಬಾಧಕಗಳನ್ನು ತಿಳಿದು ಅನುಕೂಲ ಮಾಡಿಕೊಡುವುದು ಉತ್ತಮ ಎಂದರು.
ಮಹಾದಾಯಿ ಯೋಜನೆ ಸರ್ಕಾರಕ್ಕೆ ಹೊರೆಯಲ್ಲ. ಇಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಅದನ್ನು ಸರಿಪಡಿಸಿಕೊಂಡು 3 ದಶಕದ ಸಮಸ್ಯೆಗೆ ಪರಿಹಾರ ನೀಡಲು ಇದು ಸೂಕ್ತ ಸಮಯ ಎಂದರು.
ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಭಾರತ ಪ್ರಗತಿ ಪಥದತ್ತ ಸಾಗುತ್ತಿದೆ. ಗಣಕಯಂತ್ರದಿಂದ ಸಾಧನೆ ಮಾಡಿದೆ. ಆದರೆ ಅದೇ ಗಣಕಯಂತ್ರದಿಂದ ಜೋಳದಂಥ ಆಹಾರ ಧಾನ್ಯ ಬೆಳೆಯಲು ಸಾಧ್ಯವಿಲ್ಲ. ಅದನ್ನು ನೇಗಿಲಯೋಗಿಗೆ ಮಾತ್ರ ಬೆಳೆಯಲು ಸಾಧ್ಯ ಎಂದರು.
ಇದೇ ತಿಂಗಳು 21 ರಂದು ಮಲಪ್ರಭಾ ಅಣೆಕಟ್ಟಿಗೆ ಮಹಾದಾಯಿ ನ್ಯಾಯಮಂಡಳಿ ನ್ಯಾಯಾಧೀಶರು ವಿಕ್ಷಣೆಗೆ ಬರುತ್ತಿದ್ದು, ಅವರಿಗೆ ಈ ಭಾಗದ ರೈತರ ಸಮಸ್ಯೆ ಕುರಿತು ಮನವಿ ಸಲ್ಲಿಸುವುದಾಗಿ ಹೇಳಿದರು. ನವಲಗುಂದ ಪಂಚಗ್ರಹ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ . ಈರಣ್ಣ ಕಾಂತಿಮಠ, ಎಲ್.ಎಸ್ ನಾಯಕ, ಬಸಪ್ಪ ಉತ್ತೂರ, ಚಿದಂಬರ ಮುಂಡಾಸ, ಎಸ್.ಎನ್. ಫಕ್ಕೀರಗೌಡರ, ಈರಪ್ಪ ಬಾಳೋಜಿ, ಶಿವಪ್ಪ ಚೌವಡಿ, ರುದ್ರಪ್ಪ ನಾಯ್ಕರ, ಪಂಚಪ್ಪ ಗಾಣಿಗೇರ, ಶಿವಪ್ಪ ಬನದೂರಬಿ, ನಿಂಬಣ್ಣ ಗಾಣಿಗೇರ, ಪಂಚಪ್ಪ ಮೊರಬದ, ರಾಮಪ್ಪ ಗಾಣಿಗೇರ ಮುಂತಾದವರು ಪಾಲ್ಗೊಂಡಿದ್ದರು.