ಹೊಸಪೇಟೆ: ಶಾಸಕ ಆನಂದ್ ಸಿಂಗ್ ಅವರು ಬೇಗ ಗುಣಮುಖರಾಗಲೆಂದು ಹಾರೈಸಿ ಅವರ ಬೆಂಬಲಿಗರು ಗುರುವಾರ ನಗರದಲ್ಲಿ ಪಾದಯಾತ್ರೆ ನಡೆಸಿದರು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಬೆಂಬಲಿಗರು ಪ್ರಮುಖ ರಸ್ತೆಗಳ ಮೂಲಕ ಜಂಬುನಾಥ ದೇಗುಲದ ವರೆಗೆ ಪಾದಯಾತ್ರೆ ಕೈಗೊಂಡರು. ನಗರಸಭೆ ಅಧ್ಯಕ್ಷ ಗುಜ್ಜಲ್ ನಿಂಗಪ್ಪ ಅವರ ನೇತೃತ್ವದಲ್ಲಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ದೇವಸ್ಥಾನದ ಮೆಟ್ಟಿಲುಗಳಿಗೆ ಬೆಂಬಲಿಗರು ಕಾಯಿ ಒಡೆದರು. ನಂತರ ವಿಶೇಷ ಪೂಜೆ ಸಲ್ಲಿಸಿದರು. ಆನಂದ್ ಸಿಂಗ್, ಅವರ ಪತ್ನಿ ಲಕ್ಷ್ಮಿ, ಮಗ ಸಿದ್ದಾರ್ಥ, ಹೆಣ್ಣು ಮಕ್ಕಳಾದ ವೈಷ್ಣವಿ, ಯಶಸ್ವಿನಿ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.
ಬಳಿಕ ಮಾತನಾಡಿದ ಗುಜ್ಜಲ್ ನಿಂಗಪ್ಪ, ‘ಶಾಸಕರ ಮೇಲೆ ನಡೆದ ಹಲ್ಲೆಯಿಂದ ಮನಸ್ಸಿಗೆ ಬಹಳ ನೋವಾಗಿದೆ. ಕ್ಷೇತ್ರ ಹಾಗೂ ಕ್ಷೇತ್ರದ ಜನರಿಗಾಗಿ ಆನಂದ್ ಸಿಂಗ್ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಜತೆ ಹೀಗಾಗಬಾರದಿತ್ತು. ಎಲ್ಲರಿಗೂ ಸದಾ ಒಳ್ಳೆಯದನ್ನೇ ಬಯಸುವ ಅವರಿಗೆ ಈ ರೀತಿ ಆಗಿರುವುದಕ್ಕೆ ಅನೇಕ ಜನ ನೊಂದುಕೊಂಡಿದ್ದಾರೆ’ ಎಂದು ಹೇಳಿದರು.
‘ಅವರು ಬೇಗ ಗುಣಮುಖರಾಗಬೇಕು. ಮೊದಲಿನಂತೆ ಸಹಜ ಸ್ಥಿತಿಗೆ ಬಂದು ಪುನಃ ಕ್ಷೇತ್ರಕ್ಕೆ ಬಂದು ಒಳ್ಳೆಯ ಕೆಲಸ ಮಾಡುವ ಶಕ್ತಿ ದೇವರು ಕೊಡಬೇಕು’ ಎಂದು ತಿಳಿಸಿದರು.
ಬಿ.ಎಸ್. ಜಂಬಯ್ಯ ನಾಯಕ, ಕಣ್ಣಿ ಶ್ರೀಕಂಠ, ಕಟಗಿ ಜಂಬಯ್ಯ ನಾಯಕ ಇದ್ದರು.