ಬಳ್ಳಾರಿ: ರಸ್ತೆ ವಿಸ್ತರಣೆ ಸಲುವಾಗಿ ನಗರದ ತಾಳೂರು ರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಕಾಂಪೌಂಡ್ ಅನ್ನು ಶನಿವಾರ ಕೆಡವುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದು ಸಮೀಪದ ಮಹಾನಂದಿಕೊಟ್ಟಂ ನಿವಾಸಿ ಗೋವಿಂದಪ್ಪ (50) ಸ್ಥಳದಲ್ಲೇ ಮೃತಪಟ್ಟರು.
ಸುಮಾರು 10 ಅಡಿ ಎತ್ತರದ ಕಾಂಪೌಂಡ್ ಗೋಡೆಯ ಒಂದು ತುದಿಯನ್ನು ಬೆಳಿಗ್ಗೆ 7.30ರ ವೇಳೆಯಲ್ಲಿ ಯಂತ್ರವಾಹನದಿಂದ ಕೆಡವುತ್ತಿದ್ದಾಗ ಗೋಡೆಯ ಇನ್ನೊಂದು ತುದಿಯಲ್ಲಿ ಎಂದಿನಂತೆ ಗೋವಿಂದಪ್ಪ ಕುಳಿತಿದ್ದಾಗ ಗೋಡೆ ಏಕಾಏಕಿ ಉರುಳಿಬಿತ್ತು. ಅವರೊಂದಿಗೇ ಕುಳಿತಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದರು.
ಮೃತರ ಪತ್ನಿ ಹನುಮಂತಮ್ಮ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಹಾಗೂ ಸಂಬಂಧಿಕರ ರೋದನ ಮನಕರಗುವಂತಿತ್ತು. ಘಟನೆಯಿಂದ ತಾಳೂರು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಯಂತ್ರ ವಾಹನ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಭೇಟಿ ನೀಡಿದ್ದರು.