ಹೊಸಪೇಟೆ (ವಿಜಯನಗರ): ಸಂಡೂರು ತಾಲ್ಲೂಕಿನ ಲಕ್ಷ್ಮೀಪುರದ ರೈತ ಕೆ.ಬಸಪ್ಪ ಅವರ ಹೊಲದಲ್ಲಿ ಬೆಳೆದ 75 ಕೆ.ಜಿ. ತೂಕದ ಬಾಳೆ ಗೊನೆ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ಮಳಿಗೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಎರಡು ಎಕರೆಯಲ್ಲಿ ಬೆಳೆದ ಎರಡು ಸಾವಿರ ಬಾಳೆಗೊನೆಗಳೆಲ್ಲ 75 ಕೆ.ಜಿ. ತೂಕ ಹೊಂದಿವೆ. ‘ರೈತ ಕೆ.ಬಸಪ್ಪ ಜಿ-9 ತಳಿಯ ಬಾಳೆ ಬೆಳೆದಿದ್ದು, ಮೊದಲ ಕಟಾವಿನಲ್ಲಿಯೇ ₹15 ಲಕ್ಷ ಲಾಭ ಪಡೆದಿದ್ದಾರೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹನುಮೇಶ್ ನಾಯ್ಕ ತಿಳಿಸಿದರು.
ಬಾಳೆ ಜತೆಯಲ್ಲಿ ಜಂಬುನಾಥಹಳ್ಳಿಯ ರೈತ ರಾಜಶೇಖರ್ ಬೆಳೆದ ಡ್ರ್ಯಾಗನ್ಫ್ರೂಟ್, ಸಂಡೂರಿನ ರೈತ ಚನ್ನಬಸಪ್ಪ ಬೆಳೆದ ಕ್ಯಾರಂಬೋಲಾ, ದೇವಸಮುದ್ರದ ಕಡ್ಡಿ ಸಣ್ಣರಾಮುಡು ಬೆಳೆದ ದೊಣ್ಣ ಮೆಣಸಿನಕಾಯಿ, ಮೆಟ್ರಿಯ ಶ್ರೀಹರಿ ಬೆಳೆದ ಕರಬೂಜ, ಸಂಡೂರಿನ ರೈತ ಬಸಪ್ಪ ಬೆಳೆದ ಅಡಿಕೆ, ಸೀತಾಫಲ, ಮೋಸಂಬಿ ಗಮನ ಸೆಳೆಯುತ್ತಿವೆ.