ಹೊಸಪೇಟೆ: ದೊಡ್ಡ ಖಾತೆ ಕೊಟ್ಟು ಸಣ್ಣ ಖಾತೆ ಕೊಟ್ಟರೆ ನನ್ನ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ. ಅದಕ್ಕೆ ನಾನು ಉತ್ತರಿಸುತ್ತ ಓಡಾಡಬೇಕಾಗುತ್ತದೆ ಎಂದು ಸಚಿವ ಆನಂದ್ ಸಿಂಗ್ ಅವರು ಖಾತೆ ಬದಲಿಸಿರುವುದಕ್ಕೆ ಪ್ರತಿಕ್ರಿಯಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಕಟ್ಟಡ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಹಾಗಾಗಿ ನನ್ನನ್ನು ಶಾಸಕನಾಗಿಸಿಯೇ ಇರಬೇಕು ಎಂದು ಹೇಳಿದರು.
ಸದ್ಯ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿಯೇ ಇರುವೆ. ಮುಖ್ಯಮಂತ್ರಿಗಳು ಕೈಗೊಂಡಿರುವ ನಿರ್ಧಾರ ಪಾಲಿಸುತ್ತೇನೆ. ನಾಡಿದ್ದು ಭೇಟಿಯಾಗಲು ತಿಳಿಸಿದ್ದು, ಬೆಂಗಳೂರಿಗೆ ತೆರಳಿ ಭೇಟಿ ಮಾಡುವೆ ಎಂದರು.
ಮುಖ್ಯಮಂತ್ರಿಯವರಿಗೆ ಕೆಲ ತಾಂತ್ರಿಕ ಒತ್ತಡಗಳಿರಬಹುದು. ನನ್ನ ಹಲವು ಬೇಡಿಕೆಗಳನ್ನು ಈಡೇರಿಸಿದ್ದಾರೆ ಎಂದರು.
ವಿಜಯನಗರ ಜಿಲ್ಲೆ ಘೋಷಣೆಗೂ ಖಾತೆ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಆಕ್ಷೇಪಣೆ ಸ್ವೀಕರಿಸಲಾಗಿದೆ. ಎಲ್ಲ ಪ್ರಕ್ರಿಯೆ ಮುಗಿದ ನಂತರ ಅಂತಿಮ ಅಧಿಸೂಚನೆ ಹೊರಬೀಳಬಹುದು ಎಂದರು.
ಆನಂದ್ ಸಿಂಗ್ ಅವರಿಗೆ ಈ ಮೊದಲು ಅರಣ್ಯ ಖಾತೆ ನೀಡಲಾಗಿತ್ತು. ಸಂಪುಟ ವಿಸ್ತರಣೆ ನಂತರ ಆ ಖಾತೆ ಅರವಿಂದ್ ಲಿಂಬಾವಳಿ ಅವರಿಗೆ ಕೊಟ್ಟು ಇವರಿಗೆ ಪ್ರವಾಸೋದ್ಯಮ ಖಾತೆಯನ್ನು ಸಿ.ಎಂ. ನೀಡಿದ್ದರು. ಈಗ ಪ್ರವಾಸೋದ್ಯಮ ಖಾತೆ ಬದಲಿಸಿ ಮೂಲಸೌಕರ್ಯ, ವಕ್ಫ್ ಮತ್ತು ಹಜ್ ಖಾತೆ ನೀಡಲಾಗಿದೆ.
ಆನಂದ್ ಸಿಂಗ್ ಭೇಟಿಯಾದ ರಾಜುಗೌಡ:ಖಾತೆ ಬದಲಾದ ಬೆನ್ನಲ್ಲೇ ಶಾಸಕ ರಾಜುಗೌಡ ಅವರು ಸಚಿವ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.