ಕಮಲಾಪುರ: ಕೊರೊನಾ ಭೀತಿಯಿಂದ ಪ್ರಧಾನಮಂತ್ರಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದರೆ, ಗ್ರಾಮೀಣ ಜನ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಸಾಗಿದ್ದು, ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬೇಲಿ ನಿರ್ಮಿಸಿ ಸಂಚಾರ್ ನಿರ್ಬಂಧಗೊಳಿಸುವ ಮೂಲಕ ಹೊಸದೊಂದು ಲಾಕ್ ಡೌನ್ ತಂತ್ರ ಆರಂಭಿಸಿದ್ದಾರೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮುಳ್ಳು ಜಾಲಿ, ವಿದ್ಯುತ್ ಕಂಬ, ವೈರ್, ಬಂಡೆಗಳನ್ನು ತಂದೊಡ್ಡಿ ಬಂದ್ ಮಾಡಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ಆದೇಶ ಪಾಲಿಸಲು ಏ 14ರವರೆಗೆ ಸಾರ್ವಜನಿಕರ ಸಂಚಾರ ಸ್ಥಗಿತಗೊಳಿಸಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ತಾಲ್ಲೂಕಿನ ಡೋರ್ ಜಂಬಗಾ, ಸಿರಗಾರಪುರ ಹಾಗೂ ಸೇಡಂ ರಸ್ತೆಯ ಸಣ್ಣೂರ ಗ್ರಾಮಸ್ಥರು ಈ ತಂತ್ರ ಉಪಯೋಗಿಸಿದ್ದಾರೆ.
ಡೋರ್ ಜಂಬಗಾ ಗ್ರಾಮಕ್ಕೆ ಕಿಣ್ಣಿ ಸಡಕ್ ಹಾಗೂ ಸೊಂತ ಕಡೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಬೇಲಿ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸಿರಗಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಮುಳ್ಳು ಬಡಿದಿದ್ದಾರೆ. ಸೇಡಂ ರಸ್ತೆಯಿಂದ ಸಣ್ಣೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೂ ಕಲ್ಲು ಮುಳ್ಳು ಹಾಕಿ ಬಂದ್ ಮಾಡಿದ್ದಾರೆ. ಗ್ರಾಮದ ಒಳಗಡೆ ವಾಹನಗಳಿಗೆ ಪ್ರವೇಶವಿಲ್ಲ. ಆಗಮಿಸುವ ಪ್ರಯಾಣಿಕರು ಹೊರಗಡೆಯೇ ಕೆಳಗಿಳಿದು ತಮ್ಮ ಮಾಹಿತಿ ಒದಗಿಸಬೇಕು. ವಿದೇಶ, ಹೊರ ರಾಜ್ಯ ಹಾಗೂ ವಿವಿಧ ದೊಡ್ಡ ನಗರಗಳಿಂದ ಆಗಮಿಸುವವರ ಆರೋಗ್ಯ ಕುರಿತು ಮಾಹಿತಿ ಪಡೆದುಕೊಳ್ಳಲು ಕೆಲವರನ್ನು ನೇಮಿಸಲಾಗಿದೆ ಎಂದು ಡೋರ್ ಜಂಬಗಾ ಗ್ರಾಮಸ್ಥ ಅನೀಲ ಮುಸ್ತರಿ ತಿಳಿಸಿದ್ದಾರೆ.
ಈ ಬೇಲಿ ನಿರ್ಮಿಸಿ ನಮಗೆ ನಾವೇ ನಿರ್ಬಂಧ ಹೇರಿಕೊಂಡಿದ್ದೇವೆ. ಗ್ರಾಮಕ್ಕೆ ಬೇಲಿ ಹಾಕುವುದೆಂದರೆ ಸಾರ್ವಜನಿಕರಲ್ಲಿ ಕೊರೊನಾ ಮಹಾಮಾರಿಯ ಭೀಕರತೆಯ ಕಲ್ಪನೆ ಮೂಡಿಸುವುದಾಗಿದೆ. ಸಾರ್ವಜನಿಕರಲ್ಲಿ ಎಷ್ಟೇ ಮನವಿ ಮಾಡಿದರೂ ಉಪಯೋಗ ಆಗುತ್ತಿಲ್ಲ. ತಮ್ಮ ಜೀವದ ಭಯ ಮೂಡಿದಾಗ ಮಾತ್ರ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕಲಬುರ್ಗಿ ತಾಲ್ಲೂಕಿನ ಚಿಂಚೋಳಿ ತಾಲ್ಲೂಕಿನ ಬಾವನಗುಡಿ ತಾಂಡಾ ಸೇರಿದಂತೆ ವಿವಿಧ ಗ್ರಾಮ ಹಾಗೂ ತಾಂಡಾಗಳಲ್ಲಿ ಈ ರೀತಿ ಬೇಲಿ ನಿರ್ಮಿಸುತ್ತಿರುವುದು ತಿಳಿದು ಬಂದಿದೆ.