ಹೊಸಪೇಟೆ: ಕಳಪೆ ಮೆಣಸಿನಕಾಯಿ ಬೀಜ ಮಾರಾಟ ಮಾಡಿ ರೈತರಿಗೆ ವಂಚಿಸಿರುವ ಕಂಪನಿ ವಿರುದ್ಧ ಕ್ರಮ ಜರುಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ರೈತರು ಈ ಸಂಬಂಧ ಸೋಮವಾರ ಇಲ್ಲಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕಳಪೆ ಬೀಜದಿಂದ ಮೆಣಸಿನಕಾಯಿ ಇಳುವರಿ ಬಂದಿಲ್ಲ. ನೂರಾರು ಎಕರೆಯಲ್ಲಿ ಬೆಳೆ ಬೆಳೆದಿದ್ದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ತಾಲ್ಲೂಕಿನ ಬೈಲುವದ್ದಿಗೇರಿ, ಕಾಕುಬಾಳು, ಜೋಗ ಸೇರಿದಂತೆ ಹಲವು ರೈತರು ಕಂಪನಿಯ ಮೋಸಕ್ಕೆ ಒಳಗಾಗಿ ಕೈ ಸುಟ್ಟುಕೊಂಡಿದ್ದಾರೆ. ಬೀಜ ಮಾರಾಟ ಮಾಡಿದ ಕಂಪನಿ ವಿರುದ್ಧ ಶೀಘ್ರ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ ರೈತರಿಗೆ ಪ್ರತಿ ಎಕರೆಗೆ ₹50,000 ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.