ಹೊಸಪೇಟೆ(ವಿಜಯನಗರ): ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ಕಾರ್ಮಿಕರನ್ನು ಪುನರ್ ನೇಮಕ ಮಾಡಿಕೊಳ್ಳಬೇಕೆಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಒತ್ತಾಯಿಸಿದೆ.
ಈ ಕುರಿತು ಘಟಕದ ವ್ಯವಸ್ಥಾಪಕ ಕೆ.ಬಸವರಾಜ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
‘ಹೊಸಪೇಟೆ ಬಸ್ ನಿಲ್ದಾಣದಲ್ಲಿ 28 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ 16 ಜನ ಬಡ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಗುತ್ತಿಗೆ ಬದಲಾವಣೆಯ ನಂತರ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವುದು ಖಂಡನೀಯ’ ಎಂದು ಆರೋಪಿಸಿದರು.
‘ಹೊಸದಾಗಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ನ ಸಂಸ್ಥೆ ಗುತ್ತಿಗೆಯನ್ನು ಪಡೆದಿದ್ದು, ಸ್ಥಳೀಯರ ಬದಲು ಅನ್ಯರಾಜ್ಯದವರಿಗೆ ಆದ್ಯತೆ ನೀಡಿದ್ದಾರೆ. ಅಲ್ಲದೇ ಸ್ಥಳೀಯ ಕಾರ್ಮಿಕರಿಗೆ ಕೇವಲ ನಾಲ್ಕು ಸಾವಿರ ವೇತನ ನೀಡುತ್ತಿರುವುದು ಖಂಡನೀಯ, ಕೂಡಲೇ ಸ್ಥಳೀಯರಿಗೆ ಆದ್ಯತೆಯ ಮೇರೆಗೆ ಕೆಲಸ ನೀಡಿ ವೇತನ ತಾರತಮ್ಯವನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.
ಕನ್ನಡ ಚಳವಳಿ ಕೇಂದ್ರ ಸಮಿತಿಯ ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ರಾಜು ಗುಜ್ಜಲ್, ದುರುಗಪ್ಪ, ಕಿರಣ, ಮಹಾಂತೇಶ, ನಾಗರಾಜ, ಶೇಖರ್ ಇದ್ದರು.