ಹೊಸಪೇಟೆ: ‘ಹಂಪಿ ಉತ್ಸವದ ಹೆಸರನ್ನು ವಿಜಯನಗರ ಹಂಪಿ ಉತ್ಸವವೆಂದು ಮರು ನಾಮಕರಣ ಮಾಡಬೇಕು’ ಎಂದು ವಿಜಯನಗರ ಯುವಕರ ಬಳಗ ಆಗ್ರಹಿಸಿದೆ.
ಈ ಸಂಬಂಧ ಗುರುವಾರ ಉಪ ತಹಶೀಲ್ದಾರ್ ಅಮರನಾಥ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಬಳಗದ ಪದಾಧಿಕಾರಿಗಳು ಒತ್ತಾಯಿಸಿದರು.
‘ಉತ್ಸವದಲ್ಲಿ ಮುಖ್ಯ ವೇದಿಕೆಗೆ ಹಕ್ಕ–ಬುಕ್ಕ, ಗಂಡುಗಲಿ ಕುಮಾರರಾಮ ಯುವ ವೇದಿಕೆ ಸ್ಥಾಪಿಸಬೇಕು. ಮೂರು ದಿನ ಉತ್ಸವ ಆಚರಿಸಬೇಕು. ಅದರಲ್ಲಿ ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಬೇಕು. ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಯಾವ ಕಾರಣಕ್ಕೂ ಕೈಬಿಡಬಾರದು’ ಎಂದು ಆಗ್ರಹಿಸಿದರು.
ಬಳಗದ ಅಧ್ಯಕ್ಷ ಸೋಮಶೇಖರ ನಾಯಕ, ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿಕ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಪಂಪಾಪತಿ, ಜಿ.ಯಲ್ಲಪ್ಪ, ಕಾಶಿ ಬಡಿಗೇರ್, ಅಂಬಣ್ಣ ವಾಲ್ಮೀಕಿ, ರಮೇಶ್, ಮುತ್ತಣ್ಣ, ಗಣೇಶ್ ಚವಾಣ್, ಹನುಮಂತ ರೆಡ್ಡಿ, ಕಾಶಿ ವಿಶ್ವನಾಥ ಮನವಿಗೆ ಸಹಿ ಹಾಕಿದ್ದಾರೆ.