ಹೊಸಪೇಟೆ(ವಿಜಯನಗರ): ನಾಲ್ಕು ತಿಂಗಳ ಮಾಸಾಶನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದವರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಸೋಮವಾರ ನಗರದ ಶ್ರಮಿಕ ಭವನದಿಂದ ತಾಲ್ಲೂಕು ಕಚೇರಿವರೆಗೆ ರ್ಯಾಲಿ ನಡೆಸಿದರು. ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಡಿತರ ಚೀಟಿ ರೇಷನ್ ಬಿಟ್ಟರೆ ಪುನರ್ವಸತಿ ಕಲ್ಪಿತ ಮಾಜಿ ದೇವದಾಸಿಯರಿಗೆ ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೂರು ದಿನ ಕೆಲಸ ಕೊಡಬೇಕು ಎಂದು ಸರ್ಕಾರದ ಆದೇಶವಿದ್ದರೂ ಮೂರ್ನಾಲ್ಕು ತಿಂಗಳಷ್ಟೇ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ದೇವದಾಸಿ ಮಹಿಳೆಯರಿಗೆ ನಿವೇಶನಕ್ಕಾಗಿ ಜಾಗ ಮಂಜೂರಾದರೂ ಹಂಚಿಕೆಯಾಗಿಲ್ಲ. ಹಲವು ದೇವದಾಸಿ ಮಹಿಳೆಯರ ಹೆಸರನ್ನು ಸರ್ವೆ ಪಟ್ಟಿಯಿಂದ ಕೈಬಿಟ್ಟು ಹೋಗಿದ್ದು, ಪುನಃ ಸರ್ವೇ ನಡೆಸಿ ಹೆಸರು ಸೇರಿಸಬೇಕು ಎಂದು ಒತ್ತಾಯಿಸಿದರು.
ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಹಂಪಮ್ಮ, ಕಾರ್ಯದರ್ಶಿ ಎಸ್.ಯಲ್ಲಮ್ಮ, ಗೌರವ ಅಧ್ಯಕ್ಷೆ ಕೆ.ನಾಗರತ್ನಮ್ಮ, ಸಿಐಟಿಯು ಮುಖಂಡ ಆರ್.ಭಾಸ್ಕರ್ ರೆಡ್ಡಿ ಇದ್ದರು.