ಬಳ್ಳಾರಿ: ರಾಜ್ಯ ಪರಿಶಿಷ್ಟ ಪಂಗಡಗಳ ವಾಲ್ಮೀಕಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಸಮಾವೇಶವು ಜ.23. ರಂದು ನಗರದ ವಾಲ್ಮೀಕಿ ಭವನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶಿವಣ್ಣ ತಿಳಿಸಿದರು.
'ಜಿಲ್ಲಾ ಮಟ್ಟದ ಸಮಾವೇಶದ ಜೊತೆಗೆ, ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣವೂ ನಡೆಯಲಿದೆ' ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಅಂದು ಬೆಳಿಗ್ಗೆ 11 ಗಂಟೆಗೆ ನಲ್ಲಚೆರುವು ಪ್ರದೇಶದ ವಾಲ್ಮೀಕಿ ಭವನದಲ್ಲಿ ನಡೆವ ಸಮಾರಂಭಕ್ಕೆ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಗೋಲಪಲ್ಲಿಯ ವರದಾನೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸಮಾವೇಶ ಉದ್ಘಾಟಿಸಲಿದ್ದಾರೆ' ಎಂದರು.
'ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ 2 ಸಾವಿರ ನೌಕರರಿದ್ದಾರೆ. ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳು ಸೇರಿದಂತೆ 9 ಮಂದಿ ಕೆಎಎಸ್, ಒಬ್ಬರು ಐಎಎಸ್ ಅಧಿಕಾರಿ ಸೇರಿ 200 ಮಂದಿಯನ್ನು ಸನ್ಮಾನಿಸಲಾಗುವುದು' ಎಂದರು.
'ವಾಲ್ಮೀಕಿ ಸಮುದಾಯ ಉನ್ನತ ಶಿಕ್ಷಣದಲ್ಲಿ ಕೇವಲ ಶೇ 6 ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು, ಶಿಕ್ಷಣಕ್ಕೆ ಸಂಘವು ಹೆಚ್ಚು ಒತ್ತು ನೀಡಲಿದೆ' ಎಂದು ಹೇಳಿದರು.