ಹೊಸಪೇಟೆ: ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರದ (ಬಿಟಿಪಿಎಸ್) ನೀರಿನ ಪೈಪ್ಲೈನ್ ಕಾಮಗಾರಿಗೆ ತಾಲ್ಲೂಕಿನ ಕಮಲಾಪುರ–ನಲ್ಲಾಪುರ ರಸ್ತೆಯ ಸಮೀಪ ನೆಲ ಅಗೆದು ಹಾಳುಗೆಡವಿದ್ದ ವಿಜಯನಗರ ಕಾಲದ ಕೋಟೆ ಗೋಡೆಯನ್ನು ದುರಸ್ತಿಗೊಳಿಸುವ ಕೆಲಸ ಆರಂಭಗೊಂಡಿದೆ.
ಕಾಮಗಾರಿಯಿಂದ ಕೋಟೆ ಗೋಡೆಗೆ ಹಾನಿಯಾಗಿತ್ತು. ‘ಹೊಸಪೇಟೆ: ಬಿಟಿಪಿಎಸ್ ಪೈಪ್ಲೈನ್ ಕಾಮಗಾರಿಗೆ ಅಪಸ್ವರ’ ಶೀರ್ಷಿಕೆ ಅಡಿ ಅಕ್ಟೋಬರ್ 28ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತು. ವರದಿಯಿಂದ ಎಚ್ಚೆತ್ತ ಉಪವಿಭಾಗಾಧಿಕಾರಿಯೂ ಆಗಿರುವ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣ ಪ್ರಾಧಿಕಾರದ ಆಯುಕ್ತ ಶೇಕ್ ತನ್ವೀರ್ ಆಸಿಫ್ ಅವರು ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಮಾಹಿತಿ ತರಿಸಿಕೊಂಡಿದ್ದರು. ಕೋಟೆ ಗೋಡೆಗೆ ಹಾನಿಯಾಗಿರುವುದು ಖಾತ್ರಿಯಾದ ಬಳಿಕ ಕಾಮಗಾರಿ ನಿಲ್ಲಿಸುವಂತೆ ಬಿಟಿಪಿಎಸ್ಗೆ ನಿರ್ದೇಶನ ಕೊಟ್ಟಿದ್ದರು. ಬಳಿಕ ಕಾಮಗಾರಿ ಸ್ಥಗಿತಗೊಂಡಿತ್ತು.
ನೆಲ ಅಗೆದು ಹಾಳಾದ ಕೋಟೆ ಗೋಡೆಯನ್ನು ಮೊದಲಿನಂತೆ ಕಟ್ಟುವ ಕೆಲಸ ಎರಡ್ಮೂರು ದಿನಗಳಿಂದ ಭರದಿಂದ ನಡೆಯುತ್ತಿದೆ. ನಾರಾಯಣಪುರ ಜಲಾಶಯದಿಂದ ಕುಡಿತಿನಿಯ ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರದ (ಬಿಟಿಪಿಎಸ್) ವರೆಗೆ ಪೈಪ್ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.