ಕೊಟ್ಟೂರು: ಇಲ್ಲಿನ ಬಸವೇಶ್ವರ ಬಡಾವಣೆಯ ಉದ್ಯಮಿ ಮಲ್ಲೇಶಪ್ಪ ಅವರ ಮನೆಯಲ್ಲಿನ ₹30 ಲಕ್ಷ ನಗದು ಕಳವು ಪ್ರಕರಣ ಸಂಬಂಧ ಸರ್ಕಾರಿ ಶಾಲೆಯ ಶಿಕ್ಷಕ ಸೇರಿದಂತೆ ಐವರು ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ತಾಲ್ಲೂಕಿನ ಕಾವಲಗುಂದಿ ಗ್ರಾಮದ ಜಿ.ಎಸ್.ಜೀವನ್, ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದ ಪಂಚಾಯಿತಿ ಮಾಜಿ ಸದಸ್ಯ ಪಿ.ಶ್ರೀನಿವಾಸ, ತಾಲ್ಲೂಕಿನ ಚಪ್ಪರದಹಳ್ಳಿಯ ನಿವಾಸಿ ಹಾಗೂ ಕೂಡ್ಲಿಗಿ ಸೊಲ್ಲಮ್ಮ ಸರ್ಕಾರ ಶಾಲೆ ಶಿಕ್ಷಕ ಕೆ.ಬಸವರಾಜ, ಕೊಟ್ಟೂರಿನ ಯಲ್ಲೋಜಿ ರಾವ್, ತಾಲ್ಲೂಕಿನ ರಾಂಪುರ ಗ್ರಾಮದ ಎ.ರಾಮಚಂದ್ರ ಬಂಧಿತರು.
ಇವರಿಂದ ₹12.47 ಲಕ್ಷ ನಗದು, ಇನ್ನೋವಾ, ಓಮ್ನಿ, ಇಂಡಿಕಾ ಕಾರು ವಶಕ್ಕೆ ಪಡೆಯಲಾಗಿದೆ ಎಂದು ಡಿವೈಎಸ್ಪಿ ಹಾಲಮೂರ್ತಿರಾವ್ ಮಾಹಿತಿ ನೀಡಿದ್ದಾರೆ.
ಪಟ್ಟಣದ ಸೀಡ್ಸ್ ಕಂಪನಿ ಮಾಲೀಕ ಹುಲ್ಲುಮನಿ ಮಲ್ಲೇಶ ಮನೆಯಲ್ಲಿ ಏ.11ರಂದು ರಾತ್ರಿ ದರೋಡೆಕೋರರು ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಸಿ ₹30 ಲಕ್ಷ ದೋಚಿದ್ದರು. ಪ್ರಕರಣದ ಬೆನ್ನುಹತ್ತಿದ್ದ ಪೊಲೀಸರು ಮೇ7ರಂದು 10 ಆರೋಪಿಗಳನ್ನು ಬಂಧಿಸಿದ್ದರು. ನಂತರ ಮತ್ತೊಬ್ಬ ಸಿಕ್ಕಿಬಿದ್ದಿದ್ದ.
ಪ್ರಮುಖ ಎಂದು ಹೇಳಲಾಗುತ್ತಿದ್ದ ಜಿ.ಎಸ್.ಜೀವನ್ ಪತ್ತೆಗಾಗಿ ನಿರಂತರ ಹುಡುಕಾಟ ನಡೆಸಿದ್ದರು. ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸ್ಥಳೀಯರೂ ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಬಹಿರಂಗ ಪಡಿಸಿದ್ದ.
ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಪಿಐ ಎಚ್.ದೊಡ್ಡಣ್ಣ, ಪಿಎಸ್ಐ ಎಚ್.ನಾಗಪ್ಪ, ಎಎಸ್ಐ ಗಂಗಾಧರನಾಯ್ಕ ತೊಡಗಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.