ಹೊಸಪೇಟೆ: ಮದ್ಯದಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಡಿ.ಚನ್ನಪ್ಪ ಶನಿವಾರ ಅವರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
‘ಗ್ರಾಮದಲ್ಲಿ ಮದ್ಯದಂಗಡಿ ತೆಗೆದಿರುವುದಕ್ಕೆ ಮೊದಲಿನಿಂದಲೂ ಎಲ್ಲರೂ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದಾರೆ. ಈ ಕುರಿತು ಹಲವು ಸಲ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಗಮನಕ್ಕೆ ತಂದರೂ ಅಧ್ಯಕ್ಷರು, ಸದಸ್ಯರು ಸ್ಪಂದಿಸಿಲ್ಲ. ಇದರಿಂದ ಬೇಸತ್ತು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿರುವೆ’ ಎಂದಿದ್ದಾರೆ.
‘ಮದ್ಯದಂಗಡಿ ಆರಂಭಕ್ಕೂ ಮುನ್ನ ಗ್ರಾಮದಲ್ಲಿ ಎಲ್ಲವೂ ಸರಿಯಿತ್ತು. ಈಗ ಪರಿಸ್ಥಿತಿ ಬಿಗಡಾಯಿಸಿದೆ. ಅನೇಕ ಜನ ಮದ್ಯದ ದಾಸರಾಗಿದ್ದಾರೆ. ಅನೇಕ ಕುಟುಂಬಗಳು ಹಾಳಾಗಿವೆ. ಮದ್ಯದಂಗಡಿ ತೆರವುಗೊಳಿಸುವವರೆಗೆ ನನ್ನ ಹೋರಾಟ ಮುಂದುವರೆಯಲಿದೆ’ ಎಂದು ತಿಳಿಸಿದ್ದಾರೆ.