ಬಳ್ಳಾರಿ: ‘ಮುಸ್ಲಿಮರ ವಿರುದ್ಧ ನಾನು ಮಾತನಾಡಿಲ್ಲ. ಬದಲಿಗೆ ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ ಎಂದಿದ್ದೇನೆ. ಆದರೆ, ಕಾಂಗ್ರೆಸ್ನವರು ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ದೂರಿದರು.
‘ನಾವೆಲ್ಲ ಇಲ್ಲೆ ಹುಟ್ಟಿ ಇಲ್ಲೇ ಬೆಳೆದಿದ್ದೇವೆ. ಎಲ್ಲರೂ ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದೇವೆ. ನಾನು ಸತ್ತರೂ, ಅವರು ಸತ್ತರೂ ಸ್ಮಶಾನದಲ್ಲೇ ಹೂಳುತ್ತಾರೆ. ಕಾಯ್ದೆ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವುದು ಸರಿಯಲ್ಲ’ ಎಂದರು.
ಕಾಯ್ದೆ ಕುರಿತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾಯ್ದೆ ವಿರೋಧಿಸಿ ಯಾವೊಬ್ಬ ಮುಸ್ಲಿಮರೂ ದೂರು ಕೊಟ್ಟಿಲ್ಲ. ಕೆಲವೆಡೆ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ ನಷ್ಟವಾಗಿದ್ದರಿಂದ ಉಂಟಾದ ಬೇಸರದ ಹಿನ್ನೆಲೆಯಲ್ಲಿ ನಾನು ಮಾತನಾಡಿದ್ದೆ ಅಷ್ಟೇ’ ಎಂದು ಪ್ರತಿಪಾದಿಸಿದರು.