ಕುರುಗೋಡು: ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಕಾರ್ಯಕರ್ತರು ಇಲ್ಲಿನ ಸ್ಟೇಟ್ಬ್ಯಾಂಕ್ಆಫ್ ಇಂಡಿಯಾ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ, ಅವೈಜ್ಞಾನಿಕವಾಗಿ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡದೆ ಬಲವಂತವಾಗಿ ಹಿಂದಿ ಭಾಷೆ ಹೇರಲು ಮುಂದಾಗಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗುಡಿಸಲಿ ರಾಜಾ ಮಾತನಾಡಿ, ಎಲ್ಲಾ ರಾಜ್ಯಗಳಲ್ಲಿ ಅಲ್ಲಿನ ಜನರು ಹೆಚ್ಚು ಳಕೆಮಾಡುವ ಭಾಷೆಯಲ್ಲಿ ಎಲ್ಲ ಕಚೇರಿಗಳ ವ್ಯವಹಾರ ನಡೆಯಬೇಕು. ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮವಾಗಿರಬೇಕು. ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಮಾತೃಭಾಷೆಯಲ್ಲಿ ವ್ಯವಹರಿಸಲು ಕ್ರಮಕೈಗೊಳ್ಳಬೇಕು. ನಮ್ಮ ಮಾತೃಭಾಷೆಗೆ ಧಕ್ಕೆತರುವ ಕೆಲಸ ಮಾಡಿದರೆ ಅಂಥವರ ವಿರುದ್ಧ ಉಗ್ರಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬ್ಯಾಂಕಿನ ಪ್ರಭಾರ ಶಾಖಾ ವ್ಯವಸ್ಥಾಪಕ ಓಂಕಾರ ಮನವಿ ಸ್ವೀಕರಿಸಿದರು. ಹಂಪಿ ಬಸವರಾಜ, ಪಿ.ಸಿದ್ದಿಸಾಬ್,ಗಾಳೆಪ್ಪ, ಮುದ್ದಪ್ಪ,ಸಿದ್ದಪ್ಪ, ಆದಿ, ಗುರು ಮತ್ತು ರಾಮಣ್ಣ ಇದ್ದರು.