ಹೊಸಪೇಟೆ: ವಿಜಯನಗರ ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ‘ಹನ್ನೊಂದು ತಾಲ್ಲೂಕುಗಳನ್ನು ಒಳಗೊಂಡಿರುವ ಬಳ್ಳಾರಿ ವಿಶಾಲವಾದ ಜಿಲ್ಲೆಯಾಗಿದೆ. ಜನರ ಹಿತದೃಷ್ಟಿ, ಆಡಳಿತದ ಅನುಕೂಲಕ್ಕಾಗಿ ಅದನ್ನು ವಿಭಜಿಸಿ, ವಿಜಯನಗರ ಜಿಲ್ಲೆ ಮಾಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದರು.
‘ಪ್ರತ್ಯೇಕ ಜಿಲ್ಲೆಗಾಗಿ 2007ರಿಂದ ಪಶ್ಚಿಮ ತಾಲ್ಲೂಕುಗಳಲ್ಲಿ ಧರಣಿ, ಸತ್ಯಾಗ್ರಹಗಳು ನಡೆಯುತ್ತಿವೆ. ಈಗ ಜಿಲ್ಲೆ ಅಸ್ತಿತ್ವಕ್ಕೆ ಬರಲು ಕಾಲ ಕೂಡಿ ಬಂದಿದೆ. ಈ ಹಿಂದೆ ನೀವು ಮುಖ್ಯಮಂತ್ರಿಗಳಾಗಿದ್ದಾಗ ಮನವಿ ಸಲ್ಲಿಸಿದ್ದೆವು. ಈಗ ಪುನಃ ನೀವೇ ಸಿ.ಎಂ. ಆಗಿದ್ದು, ನಿಮ್ಮ ಅವಧಿಯಲ್ಲಿ ಹೊಸ ಜಿಲ್ಲೆ ರಚನೆಯಾದರೆ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ’ ಎಂದು ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡಿದ್ದಾರೆ.
ಸಂಘದ ತಾಲ್ಲೂಕು ಅಧ್ಯಕ್ಷ ಟಿ. ಹನುಮಂತಪ್ಪ, ಕಾರ್ಯದರ್ಶಿ ಜಿ. ಕೊಟ್ರಗೌಡ, ಜಂಟಿ ಕಾರ್ಯದರ್ಶಿ ಹಾಜಿ ರಫಿಯಾ ಜಬೀನ್, ಉಪಾಧ್ಯಕ್ಷ ಕಲ್ಲಂ ಭಟ್, ಖಜಾಂಚಿ ಎಂ. ನೀಲಕಂಠಯ್ಯ, ವಕೀಲ ಗುಜ್ಜಲ್ ನಾಗರಾಜ ಇದ್ದರು.