ಹೊಸಪೇಟೆ: ‘ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದಲ್ಲದೇ ಅದನ್ನು ಬೆಂಬಲಿಸಬೇಕೆಂದು ಆಳುವ ಪಕ್ಷವು ಹಿಂದೂಗಳನ್ನು ಪ್ರಚೋದಿಸುತ್ತಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಭಾರತದ ಏಕತೆಗೆ ಧಕ್ಕೆ ಉಂಟಾಗಲಿದೆ’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಆತಂಕ ವ್ಯಕ್ತಪಡಿಸಿದ್ದಾರೆ.
‘ಈ ಕಾಯ್ದೆಯು ಭಾರತದ ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿದೆ. ಇದು ಪ್ರತಿಭಟನೆಗೆ ಅರ್ಹವಾಗಿದೆ. ಭಾರತೀಯ ಪ್ರಜೆಗಳ ನಡುವೆಯೇ ಭಿನ್ನಾಭಿಪ್ರಾಯ ಉಂಟು ಮಾಡುವ ಈ ಕಾಯ್ದೆ ಏಕತೆಗೆ ವಿರುದ್ಧವಾಗಿದೆ. ಎಲ್ಲಾ ಭಾರತೀಯ ಪ್ರಜೆಗಳು ಜಾತಿ, ಮತ, ಭೇದ ಮರೆತು ವಿರೋಧಿಸಬೇಕು’ ಎಂದು ಮನವಿ ಮಾಡಿದ್ದಾರೆ.
‘ಭಾರತದಲ್ಲಿನ ಎಲ್ಲಾ ಮುಸಲ್ಮಾನರು ಸಹ ಈ ದೇಶದ ಪ್ರಜೆಗಳೇ. ಅವರನ್ನು ಅವಮಾನಿಸುವುದು ತರವಲ್ಲ. ಇದು ಈಶಾನ್ಯ ರಾಜ್ಯಗಳ ಜನರ ಸಂಸ್ಕೃತಿಯ ಮೇಲೆ ನಡೆಸಿದ ನೇರ ದಾಳಿ. ಪಶ್ಚಿಮ ಬಂಗಾಳದ ಜನರು ಪೂರ್ವ ಬಂಗಾಳದವರೇ ಅಥವಾ ಸ್ಥಳೀಯರೇ ಎಂಬ ಶಂಕೆ ಹುಟ್ಟಿಸಿದೆ’ ಎಂದಿದ್ದಾರೆ.