ಹೊಸಪೇಟೆ: ಗ್ರಾಮ ಪಂಚಾಯಿತಿಗಳ ಅನುದಾನದಿಂದಲೇ ನೌಕರರ ವೇತನ ಭರಿಸಬೇಕೆಂದು ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದವರು ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಕಾರ್ಯನಿರ್ವಾಹಕ ಅಧಿಕಾರಿ ಆರ್.ಕೆ. ಶ್ರೀಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಗ್ರಾಮ ಪಂಚಾಯಿತಿ ನಡೆಸಿಕೊಂಡು ಹೋಗಲು ನೀಡಲಾಗುವ ಅನುದಾನದಿಂದಲೇ ನೌಕರರ ವೇತನ ಪಾವತಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಅದು ಜಾರಿಗೆ ಬಂದಿಲ್ಲ. ಸರ್ಕಾರದ ಆದೇಶ ಅನುಷ್ಠಾನಕ್ಕೆ ತರದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಖಾಲಿ ಉಳಿದಿವರ ಬಿಲ್ ಕಲೆಕ್ಟರ್ ಹುದ್ದೆ ತುಂಬಬೇಕು. ಕಂಪ್ಯೂಟರ್ ಆಪರೇಟರ್ಗಳ ಹುದ್ದೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ಪ್ರಮುಖರಾದ ಎಸ್.ಆರ್. ರಮೇಶ, ಗೋಪಾಲ, ಅಶೋಕ, ಹುಲುಗಪ್ಪ, ರಾಮಚಂದ್ರ ಮೊದಲಾದವರು ಇದ್ದರು.