ಹೊಸಪೇಟೆ (ವಿಜಯನಗರ): ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಗಲ್ಲಿಗೇರಿಸಿದ ದಿನವನ್ನು ಬುಧವಾರ ಹುತಾತ್ಮರ ದಿನವಾಗಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಆಚರಿಸಿದವು. ಅವುಗಳ ವಿವರ ಇಂತಿದೆ.
ಬಿಜೆಪಿ ಯುವಮೋರ್ಚಾ:
ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಬುಧವಾರ ಸಂಜೆ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ಅಭಯ ಆಂಜನೇಯ ದೇವಸ್ಥಾನದಿಂದ ಅಲಂಕರಿಸಿದ ವಾಹನದಲ್ಲಿ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಿದರು. ದೇಶಭಕ್ತಿ ಗೀತೆಗಳನ್ನು ಹಾಕಲಾಗಿತ್ತು. ಅದರ ಹಿಂಭಾಗದಲ್ಲಿ ಕಾರ್ಯಕರ್ತರು ಪಂಜಿನೊಂದಿಗೆ ಹೆಜ್ಜೆ ಹಾಕಿದರು.
ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂದೀಪ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಸಿಂಗ್, ರಾಜಗುರು, ಸುಖ್ದೇವ್ ಚಿಕ್ಕ ವಯಸ್ಸಿನಲ್ಲೇ ಬಲಿದಾನ ನೀಡಿದ್ದರು. ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು. ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಅಮರೇಶ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಿರಣ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್. ಇದ್ದರು.
ಎಐಡಿವೈಒ:
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಂಪಾಪತಿ, ಕೋಮು ಸಮಸ್ಯೆ ಇಲ್ಲದ ಸೌಹಾರ್ದಯುತ ಸಮಾಜವನ್ನು ಕಟ್ಟುವ ಭಗತ್ ಸಿಂಗ್ ಅವರ ಉದ್ದೇಶ ಇಂದಿಗೂ ನನಸಾಗದಿರುವುದು ದುರಂತ ಎಂದರು. ಉಪಾಧ್ಯಕ್ಷ ಎರ್ರಿಸ್ವಾಮಿ, ಪ್ರಶಾಂತ್ ಬಿ, ಪ್ರಕಾಶ್ ನಾಯಕ, ಅಜ್ಜಯ್ಯ, ವೆಂಕಟೇಶ್, ಮಲ್ಲಿಕಾರ್ಜುನ, ಸಂದೀಪ್ ಇದ್ದರು.
ಪತಂಜಲಿ ಯೋಗ ಸಮಿತಿ:
ನಗರದ ಬಲ್ದೋಟ ಉದ್ಯಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಉಮೇಶ ಎಂ., ಕಿರಣ್, ಚಂದ್ರಶೇಖರ್, ವೀರೇಶ, ಶಿವಮೂರ್ತಿ, ವೀಣಾ ಇದ್ದರು.