ಹೊಸಪೇಟೆ: ಸರ್ಕಾರಿ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರು, ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ಸೇವಾ ಭದ್ರತೆ ಕುರಿತ ರಾಜ್ಯಮಟ್ಟದ ವೆಬಿನಾರ್ ಬುಧವಾರ (ಆ.19) ನಡೆಯಲಿದೆ.
ಮಧ್ಯಾಹ್ನ 2.30ಕ್ಕೆ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸುವರು. ‘ಸೇವಾ ಭದ್ರತೆ, ಸರ್ಕಾರ ಅನುಸರಿಸಬಹುದಾದ ಕ್ರಮಗಳು’ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್, ‘ಉನ್ನತ ಶಿಕ್ಷಣ ಪದವೀಧರರ ನಿರುದ್ಯೋಗ–ಸಮೂಹ ಮಾಧ್ಯಮಗಳ ಪಾತ್ರ’ ಕುರಿತು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ವಿಷಯ ಮಂಡಿಸುವರು.
ಆರ್ಥಿಕ ತಜ್ಞ ಪ್ರೊ. ಟಿ.ಆರ್. ಚಂದ್ರಶೇಖರ್ ಅವರು ‘ಉನ್ನತ ಶಿಕ್ಷಣ ಪದವೀಧರರು, ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗ ಅವಕಾಶಗಳು’, ‘ಸೇವಾ ಭದ್ರತೆ, ಉಪನ್ಯಾಸಕರು ಮುಂದಿಡಬೇಕಾದ ಹೆಜ್ಜೆಗಳು’ ಬಗ್ಗೆ ಚಿಂತಕ ಬಿ. ರಾಜಶೇಖರಮೂರ್ತಿ ಉಪನ್ಯಾಸ ನೀಡುವರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಲ್ಲಿಕಾರ್ಜುನ ಬಿ. ಮಾನ್ಪಡೆ ಪ್ರಾಸ್ತಾವಿಕ ಭಾಷಣ ಮಾಡುವರು. ರಾಜ್ಯ ಎನ್.ಎಸ್.ಎಸ್. ಕೋಶದ ಕಾರ್ಯಕ್ರಮ ಅಧಿಕಾರಿ ಡಾ. ಪೂರ್ಣಿಮಾ ಜೋಗಿ ತಾಂತ್ರಿಕ ನೆರವು ನೀಡುವರು. ಸರ್ಕಾರಿ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರ/ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ಒಕ್ಕೂಟದಿಂದ ಈ ವೆಬಿನಾರ್ ಹಮ್ಮಿಕೊಳ್ಳಲಾಗಿದೆ.