ದಿನವಿಡೀ ಹಂಪಿಯ ಪರಿಸರದಲ್ಲಿ ಸುತ್ತಾಡುವ ಪ್ರವಾಸಿಗರು ಸಂಜೆಯಾಗುತ್ತಲೇ ಹೇಮಕೂಟದತ್ತ ಮುಖ ಮಾಡುತ್ತಾರೆ. ಸೂರ್ಯಾಸ್ತದ ಹೊತ್ತಿನಲ್ಲಿ ಜನಜಾತ್ರೆ ಇರುತ್ತದೆ. ಆದರೆ, ಇಡೀ ಪರಿಸರದಲ್ಲಿ ಎಲ್ಲಿಯೂ ಪ್ರವಾಸಿಗರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇರಲಿಲ್ಲ. ಕೆಲವರು ಮಂಟಪ, ಬಂಡೆಗಲ್ಲುಗಳನ್ನು ಹತ್ತಿಕೊಂಡು ನೋಡಿದರೆ, ಕೆಲವರು ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದರು. ಪ್ರವಾಸಿಗರಿಗೆ ಆಗುತ್ತಿದ್ದ ಅನಾನುಕೂಲವನ್ನು ಮನಗಂಡು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್.ಐ.) ಹಂಪಿ ವೃತ್ತವು, ಹೇಮಕೂಟದ ಅಂಚಿನಲ್ಲಿ ಕಲ್ಲಿನ ಆಸನಗಳ ವ್ಯವಸ್ಥೆ ಮಾಡಿದೆ. ಇದರಿಂದ ಪ್ರವಾಸಿಗರು ಕುಳಿತುಕೊಂಡು, ಸೂರ್ಯಾಸ್ತದ ನಯನ ಮನೋಹರ ದೃಶ್ಯವನ್ನು ನೋಡುವಂತಾಗಿದೆ.