ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹103 ಕೋಟಿಯಷ್ಟು ಹೆಚ್ಚಾದ ಈಜಿಪುರ ಮೇಲ್ಸೇತುವೆಗೆ ನಿರ್ಮಾಣ ವೆಚ್ಚ

ಬಿಬಿಎಂಪಿ ಎಂಜಿನಿಯರ್‌ಗಳ ವಿಳಂಬ ಧೋರಣೆಯಿಂದ ಹೆಚ್ಚಾದ ನಿರ್ಮಾಣ ವೆಚ್ಚ
Published 7 ಸೆಪ್ಟೆಂಬರ್ 2023, 16:37 IST
Last Updated 7 ಸೆಪ್ಟೆಂಬರ್ 2023, 16:37 IST
ಅಕ್ಷರ ಗಾತ್ರ

ಬೆಂಗಳೂರು: ಈಜಿಪುರ ಮೇಲ್ಸೇತುವೆಯ ಬಾಕಿ ಕಾಮಗಾರಿ ಟೆಂಡರ್‌ಗೆ ಕೊನೆಗೂ ಅನುಮತಿ ದೊರೆತಿದ್ದು, ಎಂಜಿನಿಯರ್‌ಗಳ ವಿಳಂಬ ಧೋರಣೆಯಿಂದ ಯೋಜನೆಯ ವೆಚ್ಚ ₹103 ಕೋಟಿ ಹೆಚ್ಚಾಗಿದೆ.

2017ರಲ್ಲಿ ₹203.20 ಕೋಟಿ ವೆಚ್ಚದಲ್ಲಿ ಈಜಿಪುರ ಮೇಲ್ಸೇತುವೆ ನಿರ್ಮಿಸಲು ಟೆಂಡರ್‌ಗೆ ಅನುಮೋದನೆ ನೀಡಲಾಯಿತು. ಬಿಬಿಎಂಪಿ ಎಂಜಿನಿಯರ್‌ಗಳು, ಗುತ್ತಿಗೆದಾರರ  ವಿಳಂಬದಿಂದ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಗುತ್ತಿಗೆ ರದ್ದಾಗಿತ್ತು. 2022ರ ಮಾರ್ಚ್‌ನಲ್ಲಿ ಮೂರು ತಿಂಗಳಲ್ಲಿ ಹೊಸ ಟೆಂಡರ್‌ ಕರೆದು ಗುತ್ತಿಗೆ ನೀಡಬೇಕು ಎಂದು ಹೈಕೋರ್ಟ್‌ ತಾಕೀತು ಮಾಡಿದ್ದರೂ ಬಿಬಿಎಂಪಿ ಎಂಜಿನಿಯರ್‌ಗಳು ವಿಳಂಬ ನೀತಿ ಅನುಸರಿಸಿದ್ದರು. ನಿರ್ಮಾಣ ವೆಚ್ಚಗಳು ಅಧಿಕವಾದ್ದರಿಂದ ₹103.80 ಕೋಟಿ ಹೆಚ್ಚುವರಿ ನೀಡಬೇಕಾಗಿದೆ.

ಈಜಿಪುರ ಮೇಲ್ಸೇತುವೆ ಬಾಕಿ ಉಳಿದಿರುವ ಕಾಮಗಾರಿಗೆ ನಾಲ್ಕನೇ ಬಾರಿಗೆ 2023 ಮಾರ್ಚ್‌ 1ರಂದು ನಾಲ್ಕನೇ ಬಾರಿಗೆ ಟೆಂಡರ್‌ ಆಹ್ವಾನಿಸಿತ್ತು. 17ರಂದು ತಾಂತ್ರಿಕ ಬಿಡ್‌ ತೆರೆದು, ಏಕೈಕ  ಅರ್ಹ ಬಿಡ್‌ದಾರರೊಂದಿಗೆ ಮಾತುಕತೆ ನಡೆಸಲಾಗಿತ್ತು. ಅದನ್ನು ಇನ್ನೂ ಪೂರ್ಣಗೊಳಿಸದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಮಾರ್ಚ್‌ 17ರಂದು ಕರೆದಿದ್ದ ಹೈಡೆನ್ಸಿಟಿ ಕಾರಿಡಾರ್‌ ಟೆಂಡರ್‌ಗೆ ಮಾರ್ಚ್‌ 23ರಂದೇ ಅನುಮೋದನೆ ನೀಡಿ, ಕಾರ್ಯಾದೇಶವನ್ನೂ ನೀಡಲಾಗಿದೆ.

ಕ್ರಮಕ್ಕೆ ಸಿ.ಎಂ ಸೂಚನೆ: ಈಜಿಪುರ ಮೇಲ್ಸೇತುವೆ ಕಾಮಗಾರಿ ವಿಳಂಬ, ಟೆಂಡರ್‌ ಪ್ರಕ್ರಿಯೆ ಕ್ಷಿಪ್ರವಾಗಿ ನಿರ್ವಹಿಸಲು ನಿರ್ಲಕ್ಷ್ಯ ವಹಿಸಿ ಆರ್ಥಿಕ ಹೊರೆಗೆ ಕಾರಣವಾಗಿರುವ ಎಂಜಿನಿಯರ್‌ಗಳ ಮೇಲೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿದ್ದಾರೆ.

ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿ ಮುಗಿಸಲು ಅನುಮೋದನೆ ದೊರೆತಿದೆ. ಈ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಈಗ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತದೆ.
-ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

ಸಚಿವ ಸಂಪುಟ ಅನುಮೋದನೆ

ಈಜಿಪುರ ಮೇಲ್ಸೇತುವೆಗೆ ಒಟ್ಟಾರೆ ಪರಿಷ್ಕೃತ ಮೊತ್ತ ₹307 ಕೋಟಿಗೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು. ಕೋರಮಂಗಲ 100 ಅಡಿ ಒಳ ವರ್ತುಲ ರಸ್ತೆಯಲ್ಲಿ ಕೇಂದ್ರೀಯ ಸದನ ಜಂಕ್ಷನ್‌ನಿಂದ ಈಜಿಪುರ ಸಿಗ್ನಲ್‌ವರೆಗೆ ಕೇಂದ್ರೀಯ ಸದನ ಜಂಕ್ಷನ್‌ ಬಿಡಿಎ ಕಾಂಪ್ಲೆಕ್ಸ್‌ ಜಂಕ್ಷನ್‌ ಕೋರಮಂಗಲ 60 ಅಡಿ ರಸ್ತೆ ಕೋರಮಂಗಲ 8ನೇ ಮುಖ್ಯರಸ್ತೆ ಸೋನಿ ವರ್ಲ್ಡ್‌ ಜಂಕ್ಷನ್‌ಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ಎಲಿವೇಡೆಟ್‌ ಕಾರಿಡಾರ್‌ ಅನ್ನು ನಿರ್ಮಿಸಲು ಈ ಹಿಂದೆ ನಿರ್ಧರಿಸಲಾಗಿತ್ತು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT