ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಬ್ಯಾಕ್‌ಲಾಗ್‌ ಹುದ್ದೆ ಭರ್ತಿ

ತಕ್ಷಣ ನೇಮಕಾತಿ ನಡೆಸಲು ಬೆಂಗಳೂರು ವಿ.ವಿಗೆ ಸಮಾಜ ಕಲ್ಯಾಣ ಇಲಾಖೆ ಸೂಚನೆ
Last Updated 15 ಏಪ್ರಿಲ್ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 20 ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಗೆ ತಕ್ಷಣ ಅಧಿಸೂಚನೆ ಹೊರಡಿಸಿ, ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಆಹ್ವಾನಿಸಬೇಕು. ಅಲ್ಲದೆ, ಮೂರು ತಿಂಗಳ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸೂಚಿಸಿದೆ.

‘ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಬೇಕಿದೆ. ಹೀಗಾಗಿ, ಹುದ್ದೆಗಳ ಭರ್ತಿಗೆ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆಸಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು’ ಎಂದೂ ಕುಲಪತಿಗೆ ಬರೆದ ಪತ್ರದಲ್ಲಿ ಇಲಾಖೆ ತಿಳಿಸಿದೆ.

‘ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸೂಚನೆ ಪಾಲಿಸದೇ ಇದ್ದರೆ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳು ಹಾಗೂ ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಕಾಯ್ದೆ 1990 ಸೆಕ್ಷನ್‌ 5ರ ಪ್ರಕಾರ ದಂಡ ವಿಧಿಸಲಾಗುವುದು ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಪತ್ರದಲ್ಲಿ ಸೂಚಿಸಿದಂತೆ ಕ್ರಮವಹಿಸಿ ಎರಡು ದಿನಗಳ ಒಳಗೆ ವರದಿ ನೀಡಬೇಕು’ ಎಂದೂ ತಿಳಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬೋಧಕ ವೃಂದದಲ್ಲಿ ಮೀಸಲಾತಿ ರೋಸ್ಟರ್‌ ಜಾರಿಯಲ್ಲಿ ಲೋಪ ಆಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಗೆ ದೂರು ಸಲ್ಲಿಕೆ ಆಗಿತ್ತು. ಈ ಬಗ್ಗೆ ಪರಿಶೀಲಿಸಲು ಇಲಾಖೆ ತಂಡ ರಚಿಸಿತ್ತು. ಈ ತಂಡ ಅದಾಗಲೇ ಭರ್ತಿಯಾಗಿದ್ದ 10 ಬ್ಯಾಕ್‌ಲಾಗ್‌ ಹುದ್ದೆಗಳ ಜೊತೆಗೆ ಒಟ್ಟಾರೆ 55 ಬ್ಯಾಕ್‌ಲಾಗ್‌ ಹುದ್ದೆಗಳನ್ನು ಗುರುತಿಸಿ 2018ರ ಫೆ. 15ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ವರದಿಯಲ್ಲಿರುವಂತೆ 55 ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ 2018ರ ಫೆ. 26ರಂದು ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು. ಅದರಂತೆ, ಅದೇ ವರ್ಷ ಮಾರ್ಚ್‌ 21ರಂದು ಅಧಿಸೂಚನೆ ಹೊರಡಿಸಲಾಗಿತ್ತು.

ಈ ಪೈಕಿ, 35 ಹುದ್ದೆಗಳಿಗೆ 2019ರ ಜುಲೈ 25, ಡಿ. 27 ಮತ್ತು 2020ರ ಆಗಸ್ಟ್‌ 3ರಂದು ನೇಮಕಾತಿ ನಡೆಸಲಾಗಿತ್ತು. ಉಳಿದ 20 ಹುದ್ದೆಗಳಲ್ಲಿ ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆಗಿರಲಿಲ್ಲ. ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆಗಿದ್ದರೂ ಕನಿಷ್ಠ ಅರ್ಹತೆ ಇರಲಿಲ್ಲ ಎಂದು ತಿಳಿಸಲಾಗಿತ್ತು.

ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿ.ಎಂ. ರವಿಕುಮಾರ್‌ ಎಂಬವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು. ಆದರೂ ನೇಮಕಾತಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ
ವಹಿಸಲು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿತ್ತು.

ಬ್ಯಾಕ್‌ಲಾಗ್ ನಿಯಮ ಉಲ್ಲಂಘನೆ ಆರೋಪ

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್‌ ಅವರು ರಾಜ್ಯ ಸರ್ಕಾರದ ವಿಶೇಷ ಬ್ಯಾಕ್‌ಲಾಗ್‌ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿಗಳಲ್ಲಿ ಅಕ್ರಮ ಎಸಗಿದ್ದಾರೆ’ ಎಂದು ಸಹಾಯಕ ಪ್ರಾಧ್ಯಾಪಕ ಹುದ್ದೆ ಆಕಾಂಕ್ಷಿ ಡಾ.ಎಚ್.ಕೆ. ರಾಘವೇಂದ್ರ ಆರೋಪಿಸಿದ್ದಾರೆ.

‘ಸಹಾಯಕ ಪ್ರಾಧ್ಯಾಪಕರ ಆಯ್ಕೆಗೆ ನಡೆದ ಸಂದರ್ಶನದಲ್ಲಿ ಆಯ್ಕೆ ಸಮಿತಿಯು ಅರ್ಹ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆ, ಅನುಭವ, ಶೈಕ್ಷಣಿಕ ಪ್ರಕಟಣೆಮುಂತಾದವುಗಳನ್ನು ಕಡೆಗಣಿಸಿ, ಅನರ್ಹ ಅಭ್ಯರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವ ಮೂಲಕ ನೇಮಕಾತಿ ಆದೇಶವನ್ನು ನೀಡಲಾಗಿದೆ’ ಎಂದು ಅವರು ದೂರಿದ್ದಾರೆ.

‘37 ವರ್ಷದ ನಾನು ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದೇನೆ. ಅಲ್ಲದೆ, ಐದು ವರ್ಷದ ಬೋಧನಾ ಅನುಭವ ಹೊಂದಿರುವುದಲ್ಲದೆ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಹಲವುಪತ್ರಿಕೆಗಳನ್ನು ಪ್ರಕಟಿಸಿದ್ದೇನೆ’ ಎಂದು ಅವರು
ಹೇಳಿದ್ದಾರೆ.

‘ಬೆಂಗಳೂರು ವಿಶ್ವವಿದ್ಯಾಲಯವು 2018ರಲ್ಲಿ ಹೊರಡಿಸಿದ ಅಧಿಸೂಚನೆಯಂತೆ, ರಾಜ್ಯ ಸರ್ಕಾರದ ವಿಶೇಷ ಬ್ಯಾಕ್‌ಲಾಗ್‌ ನಿಯಮಗಳ ಪ್ರಕಾರ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. 2019ರಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದೆ’ ಎಂದು ಅವರು ತಿಳಿಸಿದ್ದಾರೆ.

‘ನಿಯಮದ ಅನ್ವಯ, 29ರಿಂದ 40 ವರ್ಷ ವಯಸ್ಸಿನವರನ್ನು ಈ ಹುದ್ದೆಗೆ ಪರಿಗಣಿಸಬೇಕಾಗಿತ್ತು. ಆದರೆ, ಕುಲಪತಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು 24 ವರ್ಷದ ಮಹಿಳಾ ಅಭ್ಯರ್ಥಿಯೊಬ್ಬರಿಗೆ ನೇಮಕಾತಿ ಆದೇಶ ನೀಡಿತು. ಸಿಂಡಿಕೇಟ್‌ ಒಪ್ಪಿಗೆ ಪಡೆದ ದಿನವೇ ಅಂದರೆ 2019ರ ಡಿ.27ರಂದು ಈ ನೇಮಕ ಆದೇಶವನ್ನು ಕುಲಪತಿ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ ಮೊರೆ ಹೋಗಿದ್ದೆ. ಆ ಮಹಿಳೆಯ ನೇಮಕಾತಿಯನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದೆ’ ಎಂದೂ ಅವರು ಹೇಳಿದ್ದಾರೆ.

‘ಆಯ್ಕೆಯಾಗಿದ್ದ ಮಹಿಳೆಗೆ ಸಂದರ್ಶನದಲ್ಲಿ 41.5 ಅಂಕಗಳನ್ನು ನೀಡಲಾಗಿತ್ತು. ಎರಡನೆಯನಾಗಿದ್ದ ನನಗೆ 35.5 ಅಂಕಗಳನ್ನು ನೀಡಲಾಗಿದೆ. ಮಹಿಳೆಯ ಆಯ್ಕೆ ಅನೂರ್ಜಿತಗೊಂಡಿರುವುದರಿಂದ ಮೊದಲನೆಯನಾದ ನನಗೇ ನೇಮಕಾತಿ ಆದೇಶ ನೀಡಬೇಕು. ಆದರೆ, ಸಂದರ್ಶನದಲ್ಲಿ ವಿಫಲನಾದ ಅಭ್ಯರ್ಥಿಗೆ ಆಯ್ಕೆ ಸಮಿತಿಯನ್ನು ಪ್ರಶ್ನಿಸುವ ಯಾವುದೇ ಹಕ್ಕು ಇರುವುದಿಲ್ಲ ಎಂಬ ಸುಪ್ರೀಂಕೋರ್ಟಿನ ಅದೇಶ ಉಲ್ಲೇಖಿಸಿ ಕುಲಪತಿಯವರು ನನಗೆ ಅವಕಾಶ ನಿರಾಕರಿಸುತ್ತಿದ್ದಾರೆ’ ಎಂದೂ ರಾಘವೇಂದ್ರ ದೂರಿದ್ದಾರೆ.

‘ನಿಯಮದಂತೆ ನೇಮಕ’

‘ಸಂದರ್ಶನ ಪ್ರಕ್ರಿಯೆ ಸಂಪೂರ್ಣ ವಿಡಿಯೊ ಚಿತ್ರೀಕರಣವಾಗಿದೆ. ಸಂದರ್ಶನದಲ್ಲಿ ಯಾರು ಉತ್ತಮವಾಗಿ ಉತ್ತರಿಸಿದ್ದಾರೋ ಅಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಹೇಳಿದರು.

‘ಈಗಿನ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಸರ್ಕಾರದ ನಿಯಮಾವಳಿ ಪ್ರಕಾರ ನೇಮಕ ಮಾಡಿಕೊಳ್ಳಬೇಕೋ, ಯುಜಿಸಿ ನಿಯಮದಂತೆ ನೇಮಕ ಮಾಡಿಕೊಳ್ಳಬೇಕೋ ಎಂದು ಸಲಹೆ ಕೇಳಲಾಗಿತ್ತು. ಯುಜಿಸಿ ನಿಯಮದಂತೆ ಮಾಡಿ ಎಂದು ಸರ್ಕಾರ ಹೇಳಿದೆ. ಅದರಂತೆ, 24 ವರ್ಷದವರನ್ನೂ ನೇಮಕ ಮಾಡಿಕೊಳ್ಳಬಹುದು. ಆ ನಿಯಮ ಪಾಲಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಹೈಕೋರ್ಟ್‌ ಆದೇಶವಿದ್ದರೂ, ಮಹಿಳಾ ಅಭ್ಯರ್ಥಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ತೀರ್ಪು ಬಂದ ನಂತರ ಆಯ್ಕೆ ಸಮಿತಿ ಮತ್ತೆ ಸಭೆ ಸೇರಬೇಕು. ಈ ವಿಷಯ ಸಿಂಡಿಕೇಟ್‌ ಮುಂದೆ ಬರಬೇಕು. ಇದರಲ್ಲಿ ಕುಲಪತಿ ಒಬ್ಬರದೇ ಪಾತ್ರ ಇರುವುದಿಲ್ಲ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT