ಕರ್ನಾಟಕ ಭೂ ಮಂಜೂರಾತಿ ಕಾಯ್ದೆ 1959ರ ನಿಯಮ 27ರ ಅಡಿ ಅನ್ವಯ ಜಿಲ್ಲಾಧಿಕಾರಿ ಅವರು ತಮಗೆ ಜಾಗ ಮಂಜೂರು ಮಾಡಿದ್ದಾರೆ ಎಂದು ಅರ್ಜಿದಾರರು ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ, ಕರ್ನಾಟಕ ಭೂ ಮಂಜೂರಾತಿ ಕಾಯ್ದೆ 1959 ಎಂಬುದೇ ಇಲ್ಲ. ಮೈಸೂರು ಭೂ ಸುಧಾರಣಾ ಕಾಯ್ದೆ 1951ರ ಪ್ರಕಾರ ತಮಗೆ ಸಾಗುವಳಿ ಚೀಟಿ ನೀಡಬಹುದು ಎಂದು ಜಿಲ್ಲಾಧಿಕಾರಿ 1979ರಲ್ಲಿ ಆದೇಶಿಸಿದ್ದಾರೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಅಂತಹ ಕಾಯ್ದೆಯೇ ಇಲ್ಲ. ಇರುವುದು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961. ‘ಅಸ್ತಿತ್ವದಲ್ಲೇ ಇಲ್ಲದ 1951ರ ಕಾಯ್ದೆಯನ್ನು ಉಲ್ಲೇಖಿಸಿ ಕಂದಾಯ ಅಧಿಕಾರಿಗಳು ಸಾಗುವಳಿ ಚೀಟಿ ನೀಡಲು ಸಾಧ್ಯವೇ ಇಲ್ಲ. ನಕಲಿ ದಾಖಲೆ ಸೃಷ್ಟಿಸಿರುವುದು ಸಾಬೀತಾಗಿದೆ’ ಎಂದು ಆದೇಶದಲ್ಲಿ ವಿಶೇಷ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ.