ಬೆಂಗಳೂರು: ಕಳೆದ ವಾರದ ಕೋವಿಡ್ ಪತ್ತೆ ಪ್ರಕರಣಗಳನ್ನು ಪರಿಶೀಲಿಸಿದಾಗ ನಗರದಲ್ಲಿ ನಿತ್ಯದ ಕೋವಿಡ್ ಪ್ರಕರಣಗಳ ಪ್ರಮಾಣ ಶೇ 30ರಷ್ಟು ಇಳಿಕೆ ಕಂಡಿದೆ. ಸೋಂಕು ಪತ್ತೆ ದರವು ಶೇ 25 ರಿಂದ ಶೇ 17ಕ್ಕೆ ಇಳಿಕೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
‘ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಇಳಿಕೆಯಾಗುತ್ತಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಠಿಣಗೊಳಿಸುವ ಅವಶ್ಯಕತೆ ಈಗಲೂ ಇದೆ. ಇಂತಹ ಪ್ರದೇಶಗಳಲ್ಲಿ ಸೋಂಕು ಹರಡು ವಿಕೆ ನಿಯಂತ್ರಿಸಲು ಬಿಗಿ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯ ಆಯುಕ್ತರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೋವಿಡ್ ನಿಯಂತ್ರಣ ಸಂಬಂಧ ಗುರುವಾರ ವರ್ಚುವಲ್ ರೂಪದಲ್ಲಿ ಸಭೆ ನಡೆಸಿದ ಅವರು ಪಾಲಿಕೆಯ ಎಲ್ಲಾ 8 ವಲಯಗಳ ಸ್ಥಿತಿಗತಿಯ ವಿವರ ಪಡೆದುಕೊಂಡರು.
‘ಬಿಟಿಎಂ ಬಡಾವಣೆ, ಮಲ್ಲೇಶ್ವರ, ಎಚ್.ಎಸ್.ಆರ್ ಬಡಾವಣೆ, ಕೋಣನಕುಂಟೆ ವಾರ್ಡ್ಗಳಲ್ಲಿ ಕೋವಿಡ್ ಪ್ರಕರಣಗಳ ಪ್ರಮಾಣ ಹೆಚ್ಚು ಇದೆ. ಈ ಪ್ರದೇಶಗಳಲ್ಲಿ ಕಂಟೈನ್ಮೆಂಟ್ ಕ್ರಮಗಳನ್ನುಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.