ಕಲ್ಲು ಎತ್ತಿಹಾಕಿ ಕೊಲೆ ಪ್ರಕರಣ: ಆರೋಪಿ ಬಂಧನ
ಬೆಂಗಳೂರು: ಊಟಕ್ಕೆ ಕುಳಿತುಕೊಳ್ಳುವ ಸ್ಥಳದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಾರ್ಮಿಕನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರೀಶ್ ಬಂಧಿತ ಆರೋಪಿ. ಸೆ.24ರಂದು ಶ್ರೀನಿವಾಸನಗರದ 11ನೇ ಕ್ರಾಸ್ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಜಿತ್ (30) ಎಂಬುವವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಬಳಿಕ ಆರೋಪಿ ಪರಾರಿ ಆಗಿದ್ದರು. ಅವರನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು. ‘ಅಜಿತ್ ಹಾಗೂ ಆರೋಪಿ ಹರೀಶ್ ಇಬ್ಬರೂ ಸ್ನೇಹಿತರು. ಕೃತ್ಯ ನಡೆದಿದ್ದ ಕಟ್ಟಡದಲ್ಲಿಯೇ ಗಾರೆ ಕೆಲಸ ಮಾಡಿಕೊಂಡಿದ್ದರು. ಸೆ.24ರಂದು ಕಟ್ಟಡದ ಮೊದಲ ಮಹಡಿಯಲ್ಲಿದ್ದರು. ಆಗ ಅಜಿತ್ನ ಬಳಿ ಬಂದಿದ್ದ ಆರೋಪಿ ‘ಅದು ನಾನು ಕುಳಿತುಕೊಂಡು ಊಟ ಮಾಡುವ ಸ್ಥಳ. ಅಲ್ಲಿಂದ ಎದ್ದೇಳು’ ಎಂದು ಮನವಿ ಮಾಡಿದ್ದರು. ಆ ಸ್ಥಳದಿಂದ ಎದ್ದಿದ್ದ ಅಜಿತ್ ಅವರು ಕಟ್ಟಡದ ಮೂರನೇ ಮಹಡಿಗೆ ತೆರಳಿ ಊಟಕ್ಕೆ ಕುಳಿತಿದ್ದರು. ಅಲ್ಲಿಗೂ ಹೋಗಿದ್ದ ಹರೀಶ್ ಅಲ್ಲಿಯೂ ಗಲಾಟೆ ನಡೆಸಿದ್ದರು. ಆ ಸ್ಥಳದಲ್ಲಿ ‘ನಾನು ಕೂರಬೇಕು’ ಎಂದಿದ್ದರು. ಇಬ್ಬರ ಮಧ್ಯೆ ಗಲಾಟೆ ಆಗಿತ್ತು. ಆಗ ಅಜಿತ್ ಅವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು’ ಎಂದು ಪೊಲೀಸರು ತಿಳಿಸಿದರು. ‘ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಹರೀಶ್ಗೆ ಅಪರಾಧ ಹಿನ್ನೆಲೆಯಿದೆ. ಈ ಹಿಂದೆ ಕೊರಟಗೆರೆಯಲ್ಲಿ ನಡೆದಿದ್ದ ಗಲಾಟೆಯಲ್ಲೂ ಭಾಗಿ ಆಗಿದ್ದರು. ಅಲ್ಲದೇ ಕೊಲೆ ಪ್ರಕರಣವೊಂದರಲ್ಲೂ ಬಂಧನಕ್ಕೆ ಒಳಗಾಗಿ ಜಾಮೀನ ಮೇಲೆ ಬಿಡುಗಡೆ ಆಗಿದ್ದರು’ ಎಂದು ಪೊಲೀಸರು ಹೇಳಿದರು. ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.