ಬೆಂಗಳೂರು: ನಿಯಂತ್ರಣ ಕಳೆದುಕೊಂಡ ಕ್ರೇನ್ ವಾಹನ ಅಡ್ಡಾದಿಡ್ಡಿ ಸಂಚರಿಸಿ ಸಂಭವಿಸಿದ ಸರಣಿ ಅಪಘಾತದಲ್ಲಿ ಪಾದಚಾರಿಯೊಬ್ಬರು ಮೃತಪಟ್ಟು, ಒಂದು ಆಟೊ ಮತ್ತು ದ್ವಿಚಕ್ರ ವಾಹನ ಜಖಂಗೊಂಡ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಮುನಿಯಪ್ಪ (40) ಮೃತಪಟ್ಟ ದುರ್ದೈವಿ. ಮುನಿಯಪ್ಪ ನಡೆದುಕೊಂಡು ಮನೆ ಕಡೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಸುಂಕದಕಟ್ಟೆ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದ ಕ್ರೇನ್ನ ಬ್ರೇಕ್ ವೈಫಲ್ಯಗೊಂಡ ತಕ್ಷಣ ಅದನ್ನು ನಿಲ್ಲಿಸಲು ಯತ್ನಿಸಿದ ವೇಳೆ ಈ ದುರಂತ ನಡೆದಿದೆ.
ಮುನಿಯಪ್ಪ ಅವರಿಗೆ ಡಿಕ್ಕಿ ಹೊಡೆದ ಬಳಿಕ ನಿಂತಿದ್ದ ಆಟೊ ಮತ್ತು ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಆಟೊ ನಜ್ಜುಗುಜ್ಜಾಗಿದ್ದು, ಆಟೊದಲ್ಲಿ ಕುಳಿತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಬಳಿಕ ಕ್ರೇನ್ ಚಾಲಕ ಪರಾರಿಯಾಗಿದ್ದಾರೆ.