ಬೆಂಗಳೂರು: ವಾಹನಗಳನ್ನು ಚಲಾಯಿಸುವಾಗ ನಿಯಮಗಳನ್ನು ಉಲ್ಲಂಘಿಸುವ ಕಾರಣದಿಂದಲೇ ಬಹುತೇಕ ಅಪಘಾತಗಳು ಉಂಟಾಗುತ್ತಿವೆ. ನಿಯಮ ಪಾಲನೆ ಮತ್ತು ವೇಗ ನಿಯಂತ್ರಣ ಮಾಡಿದರೆ ಅಪಘಾತಗಳನ್ನು ಕಡಿಮೆ ಮಾಡಬಹುದು ಎಂದು ಬೆಂಗಳೂರು ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಬೆಂಗಳೂರು ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಕಸ್ತೂರಿನಗರದಲ್ಲಿ ಬುಧವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ರಸ್ತೆ ಬಳಕೆದಾರರಲ್ಲಿ ಅರಿವಿನ ಕೊರತೆ ಇದೆ. ಪ್ರಾಣ ಉಳಿಸುವ ಮೂಲ ಕೌಶಲದ ಸುರಕ್ಷತಾ ಶಿಕ್ಷಣವೂ ಬೇಕಿದೆ. ಜನರಲ್ಲಿ ಜವಾಬ್ದಾರಿಯುತ ನಡವಳಿಕೆ ಮೂಡಿಸಲು ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ ಎಂದು ವಿವರಿಸಿದರು.
ರಕ್ತಕ್ಕೆ ಪರ್ಯಾಯ ಬೇರೆ ಇಲ್ಲ. ರಕ್ತದಾನದ ಮೂಲಕ ಜೀವ ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಂಕಲ್ಪ ಇಂಡಿಯಾ ಫೌಂಡೇಶನ್ ಪದಾಧಿಕಾರಿಗಳಾದ ನರಸಿಂಹ ಶಾಸ್ತ್ರಿ, ಡಾ. ಗಿರೀಶ್, ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.