ಬೆಂಗಳೂರು: ‘ಪರಿಸರಸ್ನೇಹಿ ದೀಪಾವಳಿ ಆಚರಿಸುವ ಜತೆಗೆ ಪಟಾಕಿ ಹಚ್ಚುವಾಗ ಎಚ್ಚರ ವಹಿಸಬೇಕು’ ಎಂದು ನಗರದ ವೈದ್ಯರು ಮನವಿ ಮಾಡಿದ್ದಾರೆ.
ಮಿಂಟೊ, ನಾರಾಯಣ ನೇತ್ರಾಲಯ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಹಬ್ಬದ ದಿನಗಳಲ್ಲಿ24x7 ಸೇವೆಗಳು ದೊರೆಯಲಿದ್ದು, ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.ಮಿಂಟೊದಲ್ಲಿ 60 ಹಾಸಿಗೆಗಳನ್ನು ಪ್ರತ್ಯೇಕವಾಗಿರಿಸಿ, ವಿಶೇಷ ವಾರ್ಡ್ ರೂಪಿಸಲಾಗಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತ ರಾಥೋಡ್, ‘ಪಟಾಕಿ ಕಣ್ಣಿಗೆ ಸಿಡಿದರೆ ಶಾಶ್ವತ ಅಂಧತ್ವಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.ಪಟಾಕಿ ಸಿಡಿತದಿಂದ ಗಾಯಗೊಂಡವರಲ್ಲಿ ಶೇ 19 ರಷ್ಟು ಮಂದಿಗೆ ಕಣ್ಣಿಗೆ ಹಾನಿಯಾಗಿರುತ್ತದೆ. ಶೇ 30ರಷ್ಟು ಮಂದಿ ಕೈ ಬೆರಳಿಗೆ ಹಾನಿ ಮಾಡಿಕೊಂಡಿರುತ್ತಾರೆ. ಕಣ್ಣಿಗೆ ಗಾಯವಾದವರಲ್ಲಿ ಶೇ 40ರಷ್ಟು ಮಂದಿ 14 ವರ್ಷದೊಳಗಿನ ಮಕ್ಕಳಾಗಿರುತ್ತಾರೆ’ ಎಂದರು.
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಸ್ಕಿನ್ ಬ್ಯಾಂಕ್ನಲ್ಲಿ ತುರ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ‘2018ರಲ್ಲಿ 17, 2017ರಲ್ಲಿ 16 ಹಾಗೂ 2016ರಲ್ಲಿ 21 ಮಂದಿ ದಾಖಲಾಗಿದ್ದರು. ಜನರಲ್ಲಿ ಜಾಗೃತಿ ಮೂಡುತ್ತಿದೆ. ಹೀಗಾಗಿ, ದಾಖಲಾಗುವವರ ಸಂಖ್ಯೆ ಇಳಿಮುಖವಾಗುತ್ತಿದೆ’ ಎಂದು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಕೆ.ಟಿ.ರಮೇಶ್ ಹೇಳಿದರು.
ಚಿಕಿತ್ಸೆಗೆ ಸಂಪರ್ಕಿಸಿ: ದೂ. 080-26701646, 26707176, 9481740137.