ಬೆಂಗಳೂರು: 100 ಮೀಟರ್ ಅಂತರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಸೋಂಕಿತರಿದ್ದರೆ ಮಾತ್ರ ಆ ಪ್ರದೇಶವನ್ನು ಸೀಲ್ಡೌನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಸೋಮವಾರ ಇಲ್ಲಿ ವಲಯ ಎಂಜಿನಿಯರ್ಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್, ‘ಕಂಟೈನ್ಮೆಂಟ್ ವಲಯದ ಎಸ್ಒಪಿ (ಮಾರ್ಗದರ್ಶಿ ಸೂತ್ರ) ಬದಲಿಸಲಾಗುತ್ತಿದೆ’ ಎಂದರು.
‘ಈ ಹಿಂದೆ ಒಂದು ಪ್ರಕರಣ ಇದ್ದರೂಬ್ಯಾರಿಕೇಡ್, ತಗಡುಮತ್ತು ಮರದ ಕಂಬ ಅಳವಡಿಸಿ ಸೀಲ್ಡೌನ್ ಮಾಡಲಾಗುತ್ತಿತ್ತು.ಈ ನಿಯಮ ಕೈಬಿಡಲು ನಿರ್ಧರಿಸಲಾಗಿದೆ. ಒಂದು ಅಥವಾ ಎರಡು ಪ್ರಕರಣ ಇದ್ದರೆ ಪೋಸ್ಟರ್ ಮಾತ್ರ ಹಾಕಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.
‘ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿಯಲ್ಲೂ ಇದೇ ಮಾದರಿ ಅನುಸರಿಸಲಾಗಿದ್ದು, ಅಲ್ಲಿ 250 ಕಂಟೈನ್ಮೆಂಟ್ ವಲಯಗಳು ಮಾತ್ರ ಇವೆ’ ಎಂದು ತಿಳಿಸಿದರು.
‘ಕೋವಿಡ್ ಪ್ರಕರಣಗಳ ಕುರಿತು ಪ್ರತಿದಿನ ಜಿಯೋ ಕೋಡಿಂಗ್ ಮಾಡಲಾಗುತ್ತಿದೆ. ಅದನ್ನು ವಾರ್ಡ್ ಮಟ್ಟದ ಅಧಿಕಾರಿಗಳಿಗೆ ನೀಡಿ ಮೂರಕ್ಕಿಂತ ಕಡಿಮೆ ಪ್ರಕರಣಗಳು ಇರುವ ಕಡೆ ಸೀಲ್ಡೌನ್ ತೆರವುಗೊಳಿಸಲಾಗುವುದು. ನಗರದಲ್ಲಿಸದ್ಯ 14,767 ಕಂಟೈನ್ಮೆಂಟ್ ವಲಯಗಳಿವೆ’ ಎಂದರು.
‘ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಜನರು ಆತಂಕ ಪಡುವ ಅಗತ್ಯ ಇಲ್ಲ. ದಿನಕ್ಕೆ 20 ಸಾವಿರ ಜನರ ಪರೀಕ್ಷೆ ನಡೆಸುತ್ತಿರುವ ಕಾರಣ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚು ಪರೀಕ್ಷೆ ನಡೆಸಿ ಸೋಂಕಿತರನ್ನು ಐಸೊಲೇಷನ್ ಮಾಡಿಸುವುದರಿಂದ ಸೋಂಕು ಹರಡುವುದು ತಡೆಗಟ್ಟಿದಂತೆ ಆಗಲಿದೆ’ ಎಂದು ಹೇಳಿದರು.