ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿ ಹಾಗೂ ಐಸಿಸಿಸಿ ಕೇಂದ್ರವನ್ನು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರು ಬುಧವಾರ ಪರಿಶೀಲಿಸಿದರು.
ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಸೂಕ್ತ ಮೇಲ್ವಿಚಾರಣೆ ಮಾಡಿ ನಾಗರಿಕರಿಂದ ಬರುವ ದೂರುಗಳಿಗೆ ಕೂಡಲೇ ಸ್ಪಂದಿಸಲು ತಿಳಿಸಿದರು.
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸಹಾಯವಾಣಿ ಸಂಖ್ಯೆ 1533ಕ್ಕೆ ಬಂದಂತಹ ಕರೆಗಳನ್ನು ಸಿಬ್ಬಂದಿ ಸ್ವೀಕರಿಸಿ, ಸಹಾಯ 2.0 ತಂತ್ರಾಂಶದಲ್ಲಿ ದೂರು ದಾಖಲಿಸಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರಿನ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿರುವ ರಾಜಕಾಲುವೆಗಳಲ್ಲಿ ಕೆಎಸ್ಎನ್ಡಿಎಂಸಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ವತಿಯಿಂದ ನೀರಿನ ಮಟ್ಟವನ್ನು ಅಳೆಯುವ ಸೆನ್ಸರ್ ಗಳನ್ನು ಅಳವಡಿಸಲಾಗಿದ್ದು, ಅದನ್ನು ಐಸಿಸಿಸಿ ಕೇಂದ್ರದಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅದರ ಕಾರ್ಯಾಚರಣೆ, ಅನುಕೂಲದ ಬಗ್ಗೆ ಉಮಾಶಂಕರ್ ಮಾಹಿತಿ ಪಡೆದುಕೊಂಡರು.