ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯ ಕೊಳೆಗೇರಿ ಮಕ್ಕಳ ವಿದ್ಯಾಭ್ಯಾಸಕ್ಕೆ ರೂಪಿಸಿರುವ ‘ಮನೆ ಬಾಗಿಲಿಗೆ ಶಾಲೆ’ ವಾಹನಕ್ಕೆ ಬಿಬಿಎಂಪಿ ಗುರುವಾರ ಚಾಲನೆ ನೀಡಿತು.
ಫ್ರೀಥಿಂಕಿಂಗ್ ಫೌಂಡೇಷನ್ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತಂದಿರುವ ಈ ಶಾಲೆಗೆ ಬಿಬಿಎಂಪಿ ಸಹಾಯಕ ಆಯುಕ್ತ(ಶಿಕ್ಷಣ) ಉಮೇಶ್ ಅವರು ಚಾಲನೆ ನೀಡಿದರು.
‘ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳ ಆರಂಭಿಕ ಕಲಿಕೆಗೆ ಇದು ಅನುಕೂಲ ಆಗಲಿದೆ. ಬೇರೆಲ್ಲಾ ವಲಯಗಳಲ್ಲೂ ಈಗಾಗಲೇ ಈ ಕಾರ್ಯಕ್ರಮ ಜಾರಿಯಲ್ಲಿದೆ’ ಎಂದು ಅವರು ಹೇಳಿದರು.
‘ಪ್ರತಿ ಬಸ್ನಲ್ಲಿ 50 ವಿದ್ಯಾರ್ಥಿಗಳು ಕುಳಿತು ಪಾಠ– ಪ್ರವಚನ ಕಲಿಯಲು ಆಸನದ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಎಲ್ಲ ಕಲಿಕಾ ಸಾಮಗ್ರಿಗಳನ್ನು ಬಸ್ಸಿನಲ್ಲಿ ಇರಿಸಲಾಗಿದೆ. ಈ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು, ಒಬ್ಬರು ಡಿ ಗ್ರೂಪ್ ನೌಕರರು ಇರಲಿದ್ದಾರೆ’ ಎಂದು ವಿವರಿಸಿದರು.