ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಣೆ ವರ್ಗಾವಣೆ ಬಳಿಕವೂ ನಿಯಮ ಮೀರಿ ಬಿಲ್‌ ಪಾವತಿ

ಮೊದಲ ಹಂತದ ವೈಟ್‌ಟಾಪಿಂಗ್‌ | ಕಾಮಗಾರಿ ಹೊಣೆ ಯೋಜನೆಗಳು (ಕೇಂದ್ರ) ವಿಭಾಗದಿಂದ ರಸ್ತೆ ಮೂಲಸೌಕರ್ಯ ವಿಭಾಗಕ್ಕೆ
Last Updated 9 ಫೆಬ್ರುವರಿ 2022, 16:26 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ ಟಾಪಿಂಗ್‌ ಮೊದಲ ಹಂತದ ಕಾಮಗಾರಿಗಳ ನಿರ್ವಹಣೆಯ ಹೊಣೆಯನ್ನು ಬಿಬಿಎಂಪಿಯ ಯೋಜನೆ ವಿಭಾಗದಿಂದ ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ವರ್ಗಾಯಿಸಿದ ಬಳಿಕವೂ ಯೋಜನೆ ವಿಭಾಗದ ಎಂಜಿನಿಯರ್‌ಗಳು ಈ ಕಾಮಗಾರಿಯ ಬಿಲ್‌ಗಳ ಪಾವತಿಗೆ ನಿಯಮ ಮೀರಿ ಕ್ರಮ ಕೈಗೊಂಡಿರುವುದು ಗೊತ್ತಾಗಿದೆ.

ರಾಜ್ಯ ಸರ್ಕಾರದ ವಿಶೇಷ ಮೂಲಸೌಕರ್ಯ ಯೋಜನೆಯಡಿ 2016–17ರಲ್ಲಿ ಮಂಜೂರಾಗಿದ್ದ ವೈಟ್‌ ಟಾಪಿಂಗ್‌ ಮೊದಲ ಹಂತದ ಕಾಮಗಾರಿಗಳ ನಿರ್ವಹಣೆಯ ಹೊಣೆಯನ್ನು ಯೋಜನೆ ವಿಭಾಗದಿಂದ ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ವರ್ಗಾಯಿಸಿ ಬಿಬಿಎಂಪಿ ಮುಖ್ಯ ಆಯುಕ್ತರು 2021ರ ಅ.27ರಂದು ಆದೇಶ ಮಾಡಿದ್ದರು.

ಇದರಲ್ಲಿ ‘ನಮ್ಮ ಮೆಟ್ರೊ’ ಕಾರಿಡಾರ್‌ಗಳ ಬಳಿಯ ರಸ್ತೆಗಳ ವೈಟ್‌ ಟಾಪಿಂಗ್‌ ಕಾಮಗಾರಿಗೆ ಸಂಬಂಧಿಸಿದ (ಪಿ 3158) ಮೂರು ಬಿಲ್‌ಗಳನ್ನು ಯೋಜನೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಕಡತಗಳ ಹಸ್ತಾಂತರಕ್ಕೆ ಆದೇಶವಾದ ಬಳಿಕ ಗುತ್ತಿಗೆದಾರರಾದ ಎನ್‌ಸಿಸಿ ಲಿಮಿಟೆಡ್‌ ಸಂಸ್ಥೆಗೆ ಪಾವತಿ ಮಾಡಲು ಕ್ರಮ ಕೈಗೊಂಡಿರುವುದು ಕಂಡುಬಂದಿದೆ. ಯೋಜನೆ ಕೇಂದ್ರ ವಿಭಾಗದ ಕೇಂದ್ರ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಎನ್‌ಸಿಸಿ ಲಿಮಿಟೆಡ್‌ ಸಂಸ್ಥೆಗೆ 2021ರ ನ. 11ರಂದು ₹ 8.36 ಕೋಟಿ, 2021ರ ಡಿ.15ರಂದು ₹ 9.30 ಕೋಟಿ ಹಾಗೂ 2022ರ ಜ.24ರಂದು ₹9.18 ಕೋಟಿ ಬಿಲ್‌ ಪಾವತಿಗೆ ಶಿಫಾರಸು ಮಾಡಿದ್ದಾರೆ.

‘ಯಾವುದಾದರೂ ಕಾಮಗಾರಿ ಅನುಷ್ಠಾನದ ಹೊಣೆಯನ್ನು ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಹಸ್ತಾಂತರಿಸಿದ ಬಳಿಕ ಅದಕ್ಕೆ ಸಂಬಂಧಿಸಿದ ಕಡತಗಳನ್ನೂ ವರ್ಗಾವಣೆ ಮಾಡಲಾಗುತ್ತದೆ. ಈ ಕುರಿತು ಅಧಿಕೃತ ಆದೇಶ ಜಾರಿಯಾದ ಬಳಿಕ ಹಿಂದೆ ಕಾಮಗಾರಿ ಅನುಷ್ಠಾನ ನಡೆಸುತ್ತಿದ್ದ ವಿಭಾಗದ ಅಧಿಕಾರಿಗಳು ಅದಕ್ಕೆ ಸಂಬಂಧಿಸಿದ ಬಿಲ್‌ ಪಾವತಿಗೆ ಕ್ರಮಕೈಗೊಳ್ಳುವಂತಿಲ್ಲ. ಇದರಿಂದ ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್‌ ಪಾವತಿ ಆಗುವ ಅಪಾಯವೂ ಇದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ಬಿಲ್‌ ಪಾವತಿ– ಗಮನಕ್ಕೆ ಬಂದಿಲ್ಲ’

‘ವೈಟ್‌ಟಾಪಿಂಗ್‌ ಮೊದಲ ಹಂತದ ಕಾಮಗಾರಿಗಳ ನಿರ್ವಹಣೆಯ ಹೊಣೆಯನ್ನು ಯೋಜನೆ ವಿಭಾಗದಿಂದ ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ವರ್ಗಾಯಿಸಿರುವುದು ನಿಜ. ಆದರೆ, ಕಡತಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಯೋಜನೆ ಕೇಂದ್ರ ವಿಭಾಗದ ಅಧಿಕಾರಿಗಳು ಬಿಲ್‌ ಪಾವತಿಗೆ ಕ್ರಮ ಕೈಗೊಂಡಿರುವುದು ಗಮನಕ್ಕೆ ಬಂದಿಲ್ಲ. ಕಡತಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಯೊಜನೆ ವಿಭಾಗದ ಅಧಿಕಾರಿಗಳು ಬಿಲ್ ಪಾವತಿಗೆ ಕ್ರಮ ಕೈಗೊಂಡಿದ್ದರೆ ತಪ್ಪಾಗುತ್ತದೆ. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆ) ಎಂ.ಲೋಕೇಶ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT