ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದ್ಯತೆ ಆಧಾರದಲ್ಲಿ ಹಾಸಿಗೆ ಹಂಚಿಕೆಗೆ 28 ಟ್ರಯಾಜ್‌ ಕೇಂದ್ರ

ಟ್ರಯಾಜ್‌ ಕೇಂದ್ರಗಳಿಗೆ ಸೋಂಕಿತರು ನೇರವಾಗಿ ಹೋಗಿ ಹಾಸಿಗೆ ಸೌಲಭ್ಯ ಪಡೆಯಲು ಅವಕಾಶ
Last Updated 11 ಮೇ 2021, 15:12 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ರೋಗಿಗಳ ಆರೋಗ್ಯ ಸ್ಥಿತಿಯ ಆಧಾರದಲ್ಲಿ ಆಸ್ಪತ್ರೆ ದಾಖಲಾತಿಯ ಅಗತ್ಯವನ್ನು ನಿರ್ಧರಿಸುವ ಸಲುವಾಗಿ ಬಿಬಿಎಂಪಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಟ್ರಯಾಜ್ ಕೆಂದ್ರಗಳನ್ನು ಆರಂಭಿಸಲಾಗುತ್ತಿದೆ.‌ಈ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ.

ಸೋಂಕಿತರ ಬಂಧುಗಳು ನೇರವಾಗಿ ಈ ಕೇಂದ್ರಗಳಿಗೆ ಕರೆತಂದು ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಲಭ್ಯವಿರುವ ಹಾಸಿಗೆ ಸೌಲಭ್ಯ ಪಡೆಯಬಹುದು. ಸೋಂಕಿತರೂ ನೇರವಾಗಿ ಈ ಕೇಂದ್ರಗಳಿಗೆ ತೆರಳಿ ತಪಾಸಣೆಗೆ ಒಳಗಾಗಬಹುದು.

ಈ ಟ್ರಯಾಜ್‌ ಕೇಂದ್ರಗಳಲ್ಲಿ ವೈದ್ಯರ ತಂಡವನ್ನು ಬಿಬಿಎಂಪಿ ನೇಮಿಸಲಿದೆ. ಅವರು ದಿನದ 24 ಗಂಟೆಯೂ ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಸೊಂಕಿತರ ಆರೋಗ್ಯ ಸ್ಥಿತಿಯನ್ನು ಅವಲೋಕಿಸಿ ಅವರಿಗೆ ಸಾಮಾನ್ಯ ಹಾಸಿಗೆ ಸಾಕೇ, ಆಮ್ಲಜನಕ ಪೂರೈಕೆ ವ್ಯವಸ್ಥೆಯ ಹಾಸಿಗೆ ಒದಗಿಸಬೇಕೇ, ತೀವ್ರ ಅವಲಂಬನೆ ಘಟಕದ (ಎಚ್‌ಡಿಯು), ತೀವ್ರ ನಿಗಾ ಘಟಕ (ಐಸಿಯು) ಅಥವಾ ವೆಂಟಿಲೇಟರ್‌ ಸೌಕರ್ಯ ಇರುವ ಐಸಿಯುಗಳಿಗೆ ದಾಖಲಿಸಬೇಕೇ ಎಂಬುದನ್ನು ಈ ವೈದ್ಯರು ನಿರ್ಧರಿಸಲಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿಲ್ಲದವರಿಗೆ ಅಗತ್ಯ ಬಿದ್ದರೆ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು ಮಾಡಲು ಶಿಫಾರಸು ಮಾಡಲಿದ್ದಾರೆ.

ಪ್ರತಿಯೊಂದು ಟ್ರಯಾಜ್‌ ಕೇಂದ್ರಗಳನ್ನೂ ಸಮೀಪದ ರೆಫರಲ್‌ ಆಸ್ಪತ್ರೆ, ವೈದ್ಯಕೀಯ ಕಾಲೇಜು ಅಥವಾ ಖಾಸಗಿ ಆಸ್ಪತ್ರೆಗಳ ಜೊತೆ ಸಂಯೋಜಿಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲೂ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕೇಂದ್ರಗಳಲ್ಲಿ ಅಗತ್ಯ ವೈದ್ಯಕೀಯ ಪರಿಕರಗಳನ್ನೂ ಬಿಬಿಎಂಪಿ ಪೂರೈಸಲಿದೆ.

ಪ್ರತಿಯೊಂದು ಕೋವಿಡ್‌ ಆರೈಕೆ ಕೇಂದ್ರಗಳೂ ಟ್ರಯಾಜ್‌ ಕೇಂದ್ರಗಳನ್ನು ಹೊಂದಿರಲಿವೆ. ಅಲ್ಲಿಗೂ ಸೋಂಕಿತರು ನೇರವಾಗಿ ಹೋಗಿ ವೈದ್ಯಕೀಯ ಸಲಹೆ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT