ಬೆಂಗಳೂರು: ‘ಮನೆಯಿಂದಲೇ ಮಕ್ಕಳೊಂದಿಗೆ ಬ್ಯಾರಿ ಭಾಷೆಯಲ್ಲಿ ವ್ಯವಹರಿಸಿದರೆ ಮಾತ್ರವೇ ಬ್ಯಾರಿ ಭಾಷೆ ಉಳಿಸಲು ಸಾಧ್ಯ’ ಎಂದು ‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ ಹನೀಫ್ ಅಭಿಪ್ರಾಯಪಟ್ಟರು.
‘ಬ್ಯಾರಿ ಭಾಷೆ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರಿ.ಶ. 640ರಲ್ಲಿ ಕರಾವಳಿಗೆ ಇಸ್ಲಾಂ ಧರ್ಮ ಪ್ರಚಾರ ಆರಂಭವಾಯಿತು. ಅರಬ್ಬರು ವ್ಯಾಪಾರಿಗಳಾಗಿ ಬಂದ ನಂತರ ಬ್ಯಾರಿ ಭಾಷೆ ಬೆಳೆಯಲು ಆರಂಭವಾಯಿತು. ಕರಾವಳಿಯಲ್ಲಿ ಶೇ 99 ಬ್ಯಾರಿಗಳು ಮುಸ್ಲಿಂ ಭಾಷೆ ಮಾತನಾಡುತ್ತಾರೆ’ ಎಂದರು.
ತುಳು ಮತ್ತು ಬ್ಯಾರಿಗೆ ಹಲವು ಸಾಮ್ಯತೆ ಇವೆ. ಬ್ಯಾರಿಗಳಲ್ಲಿ ಪುದಿಯರಿ (ಹೊಸ ಅಕ್ಕಿ ಊಟ) ಎನ್ನುವುದು ಇದೆ. ಇದು ತುಳುವರಲ್ಲೂ ಇದೆ.ಇತ್ತೀಚಿನ ದಿನಗಳಲ್ಲಿ ಧರ್ಮದ ಮೇಲೆ ಸಾಂಸ್ಕೃತಿಕ ವಿಚಾರಗಳು ಸವಾರಿ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
‘ವಿದೇಶ ಹಾಗೂ ನಗರ ಜೀವನಕ್ಕೆ ಬ್ಯಾರಿಗಳು ಹೊಂದಿಕೊಂಡ ನಂತರ ಬ್ಯಾರಿ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆಯಾಗಿದೆ. ಭಾಷೆ ಉಳಿಸುವಲ್ಲಿ ಅಕಾಡೆಮಿಯೂ ಬಹಳಷ್ಟು ಕೆಲಸ ಮಾಡಿದೆ. ಆದರೆ ಈಚೆಗೆ ಮೂವರನ್ನು ಬ್ಯಾರಿ ಅಕಾಡೆಮಿಗೆ ಆಯ್ಕೆ ಮಾಡಲಾಗಿತ್ತು. ಅವರಿಗೆ ಬ್ಯಾರಿ ಭಾಷೆಯೇ ತಿಳಿದಿಲ್ಲ’ ಎಂದರು.ಪತ್ರಕರ್ತ ಎನ್.ಎ. ಎಂ. ಇಸ್ಮಾಯಿಲ್ ಇದ್ದರು.