ಬೆಂಗಳೂರು: ಬೆಳ್ಳಂದೂರು ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ ಸಮುಚ್ಚಯವೊಂದರ 10ನೇ ಮಹಡಿಯಿಂದ ಬಿದ್ದು ತ್ರಿದೀಪ್ ಕೋನ್ವಾರ್ (28) ಎಂಬುವರು ಶನಿವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.
‘ಅಸ್ಸಾಂನ ತ್ರಿದೀಪ್, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬೆಳ್ಳಂದೂರು ಬಳಿಯ ಗ್ರೀನ್ ಗ್ಲೇನ್ ಬಡಾವಣೆಯಲ್ಲಿರುವ ಶೋಭಾ ಡಾಲಿಯಾ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.
‘ಶುಕ್ರವಾರ ರಾತ್ರಿ ಪಾರ್ಟಿ ಮಾಡಲೆಂದು ತ್ರಿದೀಪ್ ಅವರು ಮನೆಯಿಂದ ಹೊರಗಡೆ ಹೋಗಿದ್ದರು. ಪಾರ್ಟಿ ಮುಗಿಸಿಕೊಂಡು ತಡರಾತ್ರಿ ಅಪಾರ್ಟ್ಮೆಂಟ್ ಸಮುಚ್ಚಯಕ್ಕೆ ವಾಪಸು ಬಂದಿದ್ದರು. ಇದೇ ಸಂದರ್ಭದಲ್ಲೇ ಕೆಲ ನಿವಾಸಿಗಳು, 10ನೇ ಮಹಡಿಯಲ್ಲೂ ಮದ್ಯದ ಪಾರ್ಟಿ ಮಾಡುತ್ತಿದ್ದರು.’
‘ಪಾರ್ಟಿಯಲ್ಲಿ ಪಾಲ್ಗೊಳ್ಳುವಂತೆ ತ್ರಿದೀಪ್ ಅವರನ್ನು ನಿವಾಸಿಗಳು ಆಹ್ವಾನಿಸಿದ್ದರು. ಅದಕ್ಕೆ ಒಪ್ಪಿದ್ದ ತ್ರಿದೀಪ್, 10ನೇ ಮಹಡಿಗೆ ಹೋಗಿದ್ದರು. ಮದ್ಯ ಕುಡಿದಿದ್ದ ಅವರು, ಅದರ ಅಮಲಿನಲ್ಲೇ ಮಹಡಿಯಲ್ಲಿ ಓಡಾಡುತ್ತಿದ್ದರು. ಇದೇ ವೇಳೆಯಲ್ಲೇ ಆಯತಪ್ಪಿ ನೆಲಮಹಡಿಗೆ ಬಿದ್ದು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಸಾಗಿಸಲಾಗಿದೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.