ಬೆಂಗಳೂರು: ನಗರದಲ್ಲಿ ಪ್ರವಾಹ ತಡೆಯಲು ಮನೆಗಳನ್ನು ನೆಲಸಮ ಮಾಡುವುದೇ ಪರಿಹಾರವಲ್ಲ. ರಾಜಕಾಲುವೆಗಳ ನೀರು ಹರಿಸಲು ಪರ್ಯಾಯ ಜಾಗ ಲಭ್ಯವಿದ್ದಲ್ಲಿ ಮನೆ ಕೆಡಹುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅತಿವೃಷ್ಟಿ ಮತ್ತು ಪ್ರವಾಹದ ಕುರಿತು ವಿಧಾನಸಭೆಯಲ್ಲಿ ಬುಧವಾರ ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ‘ಮಳೆನೀರು ರಾಜಕಾಲುವೆಗಳ ಮೂಲಕ ಹರಿದು ಹೋಗಬೇಕು. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳ ಲಿದೆ’ ಎಂದರು.
ನೀರು ಹರಿದುಹೋಗಲು ತಡೆಯೊಡ್ಡುತ್ತಿರುವ ಕಟ್ಟಡಗಳು ಇರುವ ಜಾಗದ ಬದಲಿಗೆ ಕೆಲವು ಬಡಾವಣೆಗಳವರು ಕಾಲುವೆಗೆ ಬೇಕಾದ ಜಮೀನನ್ನು ನೀಡಲು ಮುಂದಾಗಿದ್ದಾರೆ. ಆ ರೀತಿ ನೀರು ಹರಿದುಹೋಗುವ ವ್ಯವಸ್ಥೆಯಾದರೆ ಕಟ್ಟಡಗಳನ್ನು ನೆಲಸಮ ಮಾಡಬೇಕಾದ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಹೇಳಿದರು.
ರಾಜಕಾಲುವೆಗಳ ಒತ್ತುವರಿ ತೆರವು ಕಾನೂನಿನ ಪ್ರಕಾರ ಮುಂದುವರಿಯಲಿದೆ. ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದರು.
‘ಮಹಾನಗರಗಳಲ್ಲಿ ಮಳೆ ಸುರಿದಾಗ ಪ್ರವಾಹ ಉಂಟಾಗುವುದು ಸಹಜ. ಎಲ್ಲ ಮಹಾನಗರಗಳಲ್ಲೂ ಈ ಸಮಸ್ಯೆ ಇದೆ. ಈ ಬಾರಿ ಬೆಂಗಳೂರಿನಲ್ಲಿ ಹಿಂದೆಂದೂ ಆಗದಷ್ಟು ಮಳೆ ಬಿದ್ದಿದೆ. ಪ್ರವಾಹಕ್ಕೆ ಕಾರಣ ಹುಡುಕಲು ಹೊರಟರೆ ಕೊನೆ ಇರುವುದಿಲ್ಲ. ಈಗ ಸಮಸ್ಯೆ ಪರಿಹರಿಸುವುದು ಮುಖ್ಯ. ಆ ದಿಸೆಯಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ’ ಎಂದು ಹೇಳಿದರು.