ಬೆಂಗಳೂರು: ‘ಬೆಂಗಳೂರು ನಗರದಲ್ಲಿನ 210 ಕೆರೆಗಳಲ್ಲಿ 19 ಕೆರೆಗಳ ಅಸ್ತಿತ್ವವೇ ಇಲ್ಲ, 21 ಕೆರೆಗಳಷ್ಟೇ ಒತ್ತುವರಿಯಿಂದ ಮುಕ್ತವಾಗಿವೆ. ಉಳಿದಿರುವ ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಕೆರೆ) ಡಾ.ವಿ. ರಾಮ್ಪ್ರಸಾದ್ ಮನೋಹರ್ಅವರು ತಿಳಿಸಿದರು.
‘19 ಕೆರೆಗಳು ಇಲ್ಲವಾಗಿರುವುದು ಇತ್ತೀಚಿನ ದಿನಗಳಲ್ಲಿ ಅಲ್ಲ. ಕಾಲಾಂತರದಲ್ಲಿ ಅವು ಇಲ್ಲವಾಗಿವೆ. 6 ಕೆರೆಗಳ ಜಾಗದಲ್ಲಿ ಬಡವರ
ಗುಡಿಸಿಲು ನಿರ್ಮಾಣವಾಗಿ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿವೆ. ಒತ್ತುವರಿಯಾಗಿರುವ ಕೆರೆಗಳ ಪೈಕಿ 21 ಕೆರೆಗಳಲ್ಲಿ ಸರ್ಕಾರಿ ಶಾಲೆ ಮತ್ತು ಇತರೆಕಟ್ಟಡಗಳೂ ನಿರ್ಮಾಣವಾಗಿವೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘ಜೀವಂತ ಇರುವ ಕೆರೆಗಳಲ್ಲಿನ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡವುದು ಮತ್ತು ಅಭಿವೃದ್ಧಿಪಡಿಸುವ ಕೆಲಸವನ್ನು
ಹಂತ–ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಸುತ್ತಲೂ ಬೇಲಿ ನಿರ್ಮಿಸಿ ಕೆರೆಗಳನ್ನು ಸಂರಕ್ಷಣೆ ಮಾಡಲು ಪಾಲಿಕೆ ಬಜೆಟ್ನಲ್ಲಿ
₹1 ಕೋಟಿ ಅನುದಾನ ನಿಗದಿ ಯಾಗಿದೆ. ಅದರ ಹೊರತಾಗಿಯೂ ಬೇಡಿಕೆಗೆ ಅನುಸಾರವಾಗಿ ಅನುದಾನ ದೊರೆಯುತ್ತಿದೆ’ ಎಂದು ಹೇಳಿದರು.
‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 39 ಕೆರೆಗಳ ಅಭಿವೃದ್ಧಿಗೆ ₹85 ಕೋಟಿ ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ತಿಂಗಳ ಅಂತ್ಯದೊಳಗೆ 7 ಕೆರೆಗಳ ಅಭಿ ವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ. 17 ಕೆರೆಗಳ ಅಭಿವೃದ್ಧಿ ಮುಂದಿನ ಡಿಸೆಂಬರ್ನಲ್ಲಿ ಮುಕ್ತಾ ಯವಾಗಲಿದೆ. ಇದಲ್ಲದೇ 67 ಕೆರೆಗಳ ಅಭಿವೃದ್ಧಿಗೆ ₹200 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ’ ಅವರು ಎಂದರು.
–––
ಈದ್ಗಾ ಮೈದಾನ: ದಾಖಲೆ ಪರಿಶೀಲನೆ
‘ಚಾಮರಾಜಪೇಟೆ ಈದ್ಗಾ ಮೈದಾನವು ಬಿಬಿಎಂಪಿ ಆಸ್ತಿ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಕೂಲಂಕಷವಾಗಿ ದಾಖಲೆ ಪರಿಶೀಲಿಸಲಾಗುತ್ತಿದೆ’ ಎಂದು ರಾಮ್ಪ್ರಸಾದ್ ಮನೋಹರ್ ತಿಳಿಸಿದರು. ‘ಆಟದ ಮೈದಾನದಲ್ಲಿ ಬೇರೆ ಕಾರ್ಯಕ್ರಮಗಳನ್ನು ನಡೆಸಲು ಕೋರಿರುವ ಅನುಮತಿ ಬಗ್ಗೆ ಪಶ್ಚಿಮ ವಲಯ ಆಯುಕ್ತರು ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದರು. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 6,215 ಆಸ್ತಿ ಇವೆ. ಇದರಲ್ಲಿ 324 ಆಸ್ತಿಗಳನ್ನು ಗುತ್ತಿಗೆಗೆ ನೀಡಿದ್ದು, ಅವುಗಳಲ್ಲಿ 163 ಗುತ್ತಿಗೆಗಳ ಅವಧಿ ಪೂರ್ಣಗೊಂಡಿದೆ. ಸ್ವಾಧೀನಕ್ಕೆ ಪಡೆಯುವ ಮತ್ತು ಗುತ್ತಿಗೆ ನವೀಕರಿಸುವ ಪ್ರಸ್ತಾವನೆಗಳು ಸರ್ಕಾರದ ಮುಂದಿವೆ ಎಂದು ಹೇಳಿದರು.
ಉದ್ಯಾನಗಳ ಬಳಿ ಮಾಹಿತಿ ಫಲಕ
‘ಉದ್ಯಾನಗಳನ್ನು ನಿರ್ವಹಣೆ ಮಾಡುವವರ ಹೆಸರು, ದೂರವಾಣಿ ಮತ್ತು ಭಾವಚಿತ್ರಗಳ ಸಹಿತ ಫಲಕಗಳನ್ನು ಎಲ್ಲಾ ಉದ್ಯಾನಗಳ ಬಳಿ ಅಳವಡಿಸಲಾಗುವುದು’ ಎಂದು ರಾಮ್ಪ್ರಸಾದ್ ಮನೋಹರ್ ಹೇಳಿದರು. ‘ನಗರದಲ್ಲಿ 1,118 ಉದ್ಯಾನಗಳಿವೆ. ಅವುಗಳ ನಿರ್ವಹಣೆಗೆ ಪಾಲಿಕೆ ಬಜೆಟ್ನಲ್ಲಿ ₹85 ಕೋಟಿ ನಿಗದಿ ಮಾಡಲಾಗಿದೆ. ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಒಂದು ವಾರದಲ್ಲಿ ಎಲ್ಲಾ ಉದ್ಯಾನಗಳ ಬಳಿಯೂ ಮಾಹಿತಿ ಫಲಕ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಇನ್ನೂ 230 ಉದ್ಯಾನಗಳ ಅಭಿವೃದ್ಧಿ ಆಗಬೇಕಿದ್ದು, ಈ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
‘ಬಿಬಿಎಂಪಿ ಶಾಲೆಗಳ ಮೂಲಸೌಕರ್ಯ ಹೆಚ್ಚಳ’
ಬಿಬಿಎಂಪಿ ಶಾಲೆಗಳ ಮೂಲ ಸೌಕರ್ಯ ಹೆಚ್ಚಳಕ್ಕೆ ₹35 ಕೋಟಿ ಅನುದಾನ ದೊರೆತಿದೆ ಎಂದು ರಾಮ್ಪ್ರಸಾದ್ ಮನೋಹರ್ ತಿಳಿಸಿದರು. ‘ಮಳೆ ನೀರು ನುಗ್ಗುವ ಸ್ಥಿತಿಯಲ್ಲೂ ಕೆಲವು ಶಾಲೆಗಳಿದ್ದು, ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಿದ್ದು, ಶಿಕ್ಷಕರ ಕೌಶಲ ಹೆಚ್ಚಿಸಲು ತರಬೇತಿ ಕಾರ್ಯಕ್ರಮ ಆಯೋಜಿಸಲು ಸೂಚಸಿದ್ದೇನೆ’ ಎಂದರು. ‘ಬಿಸಿಯೂಟವನ್ನು ಇಸ್ಕಾನ್ ಸಂಸ್ಥೆ ಮೂಲಕ ಪಡೆಯುತ್ತಿದ್ದು, ಪ್ರಾಥಮಿಕ ಶಾಲೆ ಮಕ್ಕಳಿಗೆ ತಲಾ ₹10 ಮತ್ತು ಪಿ.ಯು ಕಾಲೇಜಿನ ವಿದ್ಯಾರ್ಥಿಗಳಿಗೆ ತಲಾ ₹20 ದರದಲ್ಲಿ ಊಟವನ್ನು ಇಸ್ಕಾನ್ ಪೂರೈಸುತ್ತಿತ್ತು. ಬೆಲೆ ಏರಿಕೆ ಕಾರಣ ದಿಂದ ಹೆಚ್ಚಿಸಬೇಕು ಎಂಬ ಬೇಡಿಕೆ ಇತ್ತು. ಅದನ್ನು ಕ್ರಮವಾಗಿ ₹12 ಮತ್ತು ₹23ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.