ಬೆಂಗಳೂರು: ನಗರದಲ್ಲಿ ಶನಿವಾರ ಉತ್ತಮ ಮಳೆ ಸುರಿಯಿತು. ಹಲವು ಪ್ರದೇಶಗಳಲ್ಲಿ ಕಾಲುವೆಗಳು ತುಂಬಿ, ರಸ್ತೆ ಮೇಲೆಯೇ ನೀರು ಹರಿಯಿತು.
ಹಲವು ದಿನಗಳಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಕಾಣಿಸುತ್ತಿದ್ದು, ಕೆಲವೆಡೆ ಮಾತ್ರ ತುಂತುರು ಮಳೆ ಆಗಿತ್ತು. ಶನಿವಾರವೂ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಹಲವೆಡೆ ಮಳೆಯಾಯಿತು.
ಕೆಂಗೇರಿ, ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ದೀಪಾಂಜಲಿನಗರ, ಗಿರಿನಗರ, ಹನುಮಂತನಗರ, ಬಸವನಗುಡಿ, ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಶೇಷಾದ್ರಿಪುರ, ಆರ್.ಟಿ.ನಗರ, ಗಾಂಧಿನಗರ, ಮೆಜೆಸ್ಟಿಕ್ ಹಾಗೂ ಸುತ್ತಮುತ್ತ ಮಳೆ ಸುರಿಯಿತು.
ಎಂ.ಜಿ. ರಸ್ತೆ, ಅಶೋಕನಗರ, ಶಿವಾಜಿನಗರ, ಹಲಸೂರು, ಇಂದಿರಾನಗರ, ದೊಮ್ಮಲೂರು, ಹೆಣ್ಣೂರು, ಬಾಣಸವಾಡಿ, ಶಾಂತಿನಗರ, ಲಾಲ್ಬಾಗ್, ವಿಲ್ಸನ್ ಗಾರ್ಡನ್, ಕೋರಮಂಗಲ, ಮಡಿವಾಳ, ಎಚ್ಎಸ್ಆರ್ ಲೇಔಟ್ ಹಾಗೂ ಇತರೆಡೆಯೂ ಮಳೆ ಇತ್ತು.
ಮೆಜೆಸ್ಟಿಕ್ ರೈಲ್ವೆ ಸೇತುವೆ, ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ ಸೇರಿದಂತೆ ಹಲವೆಡೆ ರಸ್ತೆ ಮೇಲೆಯೇ ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು.
ಮಳೆ ಸುರಿಯುವ ವೇಳೆಯಲ್ಲಿ ಕೆಲವರು, ಕೊಡೆ ಹಿಡಿದು ಹೆಜ್ಜೆ ಹಾಕಿದರು. ಸವಾರರು, ತಮ್ಮ ದ್ವಿಚಕ್ರ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಂಗಡಿ–ಮಳಿಗೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದ ದೃಶ್ಯಗಳು ಕಂಡುಬಂದವು.
‘ಕೆಲದಿನ ಮಳೆ ಬಿಡುವು ನೀಡಿತ್ತು. ಶನಿವಾರ ಉತ್ತಮ ಮಳೆ ಆಗಿದೆ. ರಸ್ತೆಗಳಲ್ಲಿ ನೀರು ಹರಿಯುತ್ತಿದ್ದ ಬಗ್ಗೆ ಮಾತ್ರ ದೂರುಗಳು ಬಂದಿದ್ದವು. ಅದನ್ನು ಹೊರತುಪಡಿಸಿ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.